ಕಣ್ಣಮುಂದೆಯೇ ಸ್ಪೋಟ ಸಂಭವಿಸಿದ್ದನ್ನು ಕಂಡಾಗ ಉಸಿರೇ ನಿಂತ ಅನುಭವ. ಒಮ್ಮೆ ಮನೆಮಂದಿಯ ಎಲ್ಲರ ನೆನಪಾಯಿತು. ತಾಯ್ನಾಡು ಸೇರಿದರೆ ಸಾಕು ಎನ್ನುವ ಮಾತು ಇಸ್ರೇಲ್ ನಲ್ಲಿ ಸಿಲುಕಿಕೊಂಡ ಕರಾವಳಿ ಮೂಲದ ಮಹಿಳೆಯೊಬ್ಬರದ್ದು.
ಬಂಡುಕೋರರ ದಾಳಿಯಿಂದಾಗಿ ಇಸ್ರೇಲ್ ಸಂಪೂರ್ಣ ನಲುಗಿದೆ. ಮುನ್ನೂರಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. ಪಾಲೆಸ್ತಿನ್ ವಿರುದ್ಧ ಇಸ್ರೇಲ್ ಸಮರಕ್ಕೆ ಮುಂದಾಗಿದೆ. ಸೇಡು ತೀರಿಸಿಯೇ ಸಿದ್ಧ ಎಂದಿದೆ.
ಈ ನಡುವೆ ಅನೇಕ ಭಾರತೀಯರು ಅದರಲ್ಲೂ ಕರಾವಳಿಗರು ಇಸ್ರೇಲ್ ನಲ್ಲಿ ಕೇರ್ ಗೀವರ್ ಆಗಿ ದುಡಿಯುತ್ತಿದ್ದಾರೆ. ಉತ್ತಮ ವೇತನದ ಹಿನ್ನೆಲೆಯಲ್ಲಿ ತೆರಳಿರುವ ಅವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಸ್ತುತ ಭಾರತೀಯರೆಲ್ಲರು ಸುರಕ್ಷಿತವಾಗಿದ್ದಾರೆ. ಅಗತ್ಯ ಬಿದ್ದಲ್ಲಿ ಅವರನ್ನು ಕರೆತರುವ ಕೆಲಸ ಮಾಡಲಾಗುವುದೆಂದು ಭಾರತ ಸರಕಾರ ಭರವಸೆ ನೀಡಿದೆ. ಆದರೂ ಆತಂಕವಂತೂ ಇದ್ದೇ ಇದೆ. ಕೆಲವು ಭಾಗಗಳಲ್ಲಿ ಸ್ಪೋಟಗೊಂಡಿರುವುದನ್ನು ನಮ್ಮವರು ಹತ್ತಿರದಿಂದ ಗಮನಿಸಿರುವುದು ಆತಂಕಕ್ಕೆ ಕಾರಣ.
ಸೈರನ್ ಮೊಳಗುತ್ತಿದ್ದಂತೆ ಬಂಕರ್ ಸೇರಬೇಕು:
ಆತಂಕದ ಸನ್ನಿವೇಶ ಎದುರಾಗುತ್ತಿದ್ದಂತೆ ಸೈರನ್ ಮೊಳಗುತ್ತದೆ. ಇದಾದ ಒಂದೆರಡು ನಿಮಿಷಗಳಲ್ಲಿ ಬಂಕರ್ ಸೇರಬೇಕು. ತಪ್ಪಿದ್ದಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿಯಂತೆ. ಈ ಕಾರಣದಿಂದಾಗಿ ಬಂಕರ್ ಸೇರುವುದು ಅನಿವಾರ್ಯ.
ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಯಾವುದೇ ಹೆಚ್ಚಿನ ಆತಂಕವಿಲ್ಲ ಎಂದು ಇಸ್ರೇಲ್ ನಲ್ಲಿರುವ ಭಾರತೀಯರು ತಿಳಿಸಿದ್ದಾರೆ.