ವಿಟ್ಲ : ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಹಲ್ಲೆ ಆರೋಪ; ದೂರು-ಪ್ರತಿದೂರು

ವಿಟ್ಲ: ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಗೆ ಗ್ರಾಹಕನೋರ್ವ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.

ವಿಟ್ಲ ಮೇಗಿನಪೇಟೆಯಲ್ಲಿ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುವ ಸದಾನಂದ ಅವರು ಕಮರ್ಷಿಯಲ್ ಗ್ಯಾಸ್ ಅನ್ನು ಅಂಗಡಿಗಳಿಗೆ ಕೊಂಡೊಯ್ಯುತ್ತಿದ್ದ ವೇಳೆ ಮೊನ್ನೆ ಯಾಕೆ ಗ್ಯಾಸ್ ಹಾಕಿಲ್ಲವೆಂದು ಗಲಾಟೆ ನಡೆಸಿದ್ದು, ಈ ವೇಳೆ ಅವರು ರಜೆ ಇತ್ತು ಹಾಗಾಗಿ ಗ್ಯಾಸ್ ಹಾಕಿಲ್ಲವೆಂದು ಹೇಳಿದ್ದು, ನಂತರ ಆತ ಇತರರೊಂದಿಗೆ ಸೇರಿ ಹಲ್ಲೆ ನಡೆಸಿರುವುದಾಗಿ ಠಾಣೆಗೆ ನೀಡಿದ ದೂರಿನಲ್ಲಿ ಸದಾನಂದ ತಿಳಿಸಿದ್ದಾರೆ.

ಈ ಬಗ್ಗೆ ಅಂಗಡಿ ಮಾಲಕ ಅಬ್ದುಲ್ ಸಮದ್ ಘಟನೆಯ ದೃಶ್ಯದ ಸಿಸಿಟಿವಿ ವೀಡಿಯೊ ಫುಟೇಜ್ ಸಹಿತ ಪೊಲೀಸರಿಗೆ ದೂರು ನೀಡಿದ್ದಾರೆ.‌

ನಮ್ಮ ಅಂಗಡಿಗೆ ಇಂಡಿಯನ್ ಗ್ಯಾಸ್ ಸಂಸ್ಥೆಯಲ್ಲಿ ಕಳೆದ ಒಂದು ವಾರದ ಹಿಂದೆ ಅನಿಲ ಪೂರೈಕೆ ಮಾಡಲು ತಿಳಿಸಿದ್ದು, ಪೂರೈಕೆ ಮಾಡಿಲ್ಲ. ಈ ಬಗ್ಗೆ ಫೋನ್ ಮಾಡಿ ವಿಚಾರಿಸಿದಾಗ ಅದರ ಸಿಬ್ಬಂದಿ ಉಡಾಫೆಯಿಂದ ಮಾತನಾಡಿ, ನಿಂದಿಸಿರುತ್ತಾನೆ ಎಂದು ಸಮದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಅದರ ಚಾಲಕ ಏಕಾಏಕಿ ಪಿಕಪ್ ವಾಹನವನ್ನು ಅಂಗಡಿ ಜಗಲಿಗೆ ನುಗ್ಗಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಸಮದ್ ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!