ಬಂಟ್ವಾಳ, ನ.30: ಇಲ್ಲಿನ ಸಮೀಪದ ಕಲ್ಲಡ್ಕ, ಗೋಳ್ತಮಜಲು ಎಂಬಲ್ಲಿರುವ ಅನುಗ್ರಹ ಮಹಿಳಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಇತ್ತೀಚೆಗೆ (26.11.2022ರಂದು) ಆಯೋಜಿಸಲಾಯಿತು.
ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ಫಾತಿಮಾ ಸಫ್ರತ್ ರವರ ಕಿರಾಅತ್ (ಕುರ್ ಆನ್) ಪಠಣದದೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಆನಂತರ, ಪಿಯುಸಿ ಮತ್ತು ಪದವಿಯ ನಾಲ್ಕು ಕ್ರೀಡಾ ವಿಭಾಗಗಳ ವಿದ್ಯಾರ್ಥಿಗಳಿಂದ ಸುಂದರವಾದ ಪಥ ಸಂಚಲನವನ್ನು ಮಾಡಲಾಯಿತು.
ಬಲೂನುಗಳನ್ನು ಹಾರಿಸುವುದರ ಮೂಲಕ ಕ್ರೀಡೋತ್ಸವವನ್ನು ಉದ್ಘಾಟಿಸಿದ ಅನುಗ್ರಹ ಎಜುಕೇಶನಲ್ ಟ್ರಸ್ಟ್ನ ಸಂಚಾಲಕರಾದ ಶ್ರೀಯುತ ಅಮಾನುಲ್ಲಾ ಖಾನ್ ರವರು
ಕ್ರೀಡೆಗಳು ವಿದ್ಯಾರ್ಥಿನಿಯರ ಶಿಸ್ತು, ಸಂಯಮ,ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರಲ್ಲದೆ, ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ನಂತರ ಮಾತನಾಡಿದ ಕಾಲೇಜು ಆಡಳಿತ ಸಮಿತಿಯ ಕೋಶಾಧಿಕಾರಿ ಶ್ರೀಯುತ ಹೈದರ್ ಅಲಿ ನೀರ್ಕಜೆಯವರು, ಪ್ರತಿಯೊಬ್ಬರು ಕ್ರೀಡೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕಾಗಿದೆಯೆಂದು ಪ್ರೇರೇಪಿಸಿದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಶ್ರೀಯುತ ಇಬ್ರಾಹಿಂ ಚೆಂಡಾಡಿ ಮತ್ತು ಶ್ರೀಯುತ ಅಬ್ದುಲ್ಲಾ ಚೆಂಡಾಡಿ, ಟ್ರಸ್ಟ್ನ ಸದಸ್ಯರಾದ ಅಬ್ದುಲ್ಲ ಕುಂಞ, ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಬಿ.ಡಿ. ಮತ್ತು ಉಪಪ್ರಾಂಶುಪಾಲರಾದ ಮಮಿತಾ ಎಸ್, ರೈ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ನಂತರ ಪಿಯುಸಿ ಮತ್ತು ಪದವಿಯ ನಾಲ್ಕು ಕ್ರೀಡಾ ವಿಭಾಗಗಳ ವಿದ್ಯಾರ್ಥಿನಿಯರು ಓಟ, ಕಬಡ್ಡಿ, ರಿಲೇ, ತ್ರೋ ಬಾಲ್, ಖೋ ಖೋ, ಶಟಲ್ ಮೊದಲಾದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಮತ್ತು ಬೋಧಕ ವೃಂದದವರು ವಿಜೇತರಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳ ಉತ್ತಮ ಸಾಧನೆಗಾಗಿ ಪ್ರಾಂಶುಪಾಲರು ಅಭಿನಂದಿಸಿದರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಕುಮಾರಿ ಫಾತಿಮಾ ಸ್ವಾಗತಿಸಿ, ಕೊನೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ಮಶಿದ ಧನ್ಯವಾದವಿತ್ತರು, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಕುಮಾರಿ ಹಾಜಿರ ತಫ್ಶೀರಾರವರು ಕಾರ್ಯಕ್ರಮವನ್ನು ನಿರೂಪಿಸಿದರು.