ಮಂಗಳೂರು: ಕರಾವಳಿಯ ಬಿಜೆಪಿ ಮುಖಂಡ ಹಾಗೂ ಚಿನ್ನದ ವ್ಯಾಪಾರಿ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಯನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿತೆಯನ್ನು ಸಲ್ಮಾ ಭಾನು ಎಂದು ಗುರುತಿಸಲಾಗಿದೆ.
ಕಳೆದ ಫೆ.26 ರಂದು ಜಗನ್ನಾಥ ಶೆಟ್ಟಿ ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ನಾಲ್ವರು ಮೈಸೂರಿಗೆ ಡ್ರಾಪ್ ಕೊಡುವುದಾಗಿ ಕಾರಿನಲ್ಲಿ ಕರೆದೊಯ್ದು ಲಾಡ್ಜ್ಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ರೂಮ್ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿ 4 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆಗ ಅಂತಿಮವಾಗಿ 50 ಲಕ್ಷ ರೂಪಾಯಿ ನೀಡಿ ಜಗನ್ನಾಥ್ ತೆರಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಗ್ಯಾಂಗ್ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ನೊಂದು ಜಗನ್ನಾಥ ಶೆಟ್ಟಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇರೆಗೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಭಾನು ಎಂಬುವರನ್ನು ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಗನ್ನಾಥ ಶೆಟ್ಟಿಯಂತೆ ಹಲವರು ಈ ಜಾಲದಲ್ಲಿ ಸಿಲುಕಿಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಆರೋಪಿ ಸಲ್ಮಾಭಾನು ವಿಚಾರಣೆ ಚುರುಕುಗೊಂಡಿದ್ದು, ಆಕೆಗೆ ಸಹಕಾರ ಕೊಟ್ಟವರು, ವಿಡಿಯೋ ರೆಕಾರ್ಡ್ ಮಾಡಿದವರು, ಹಣ ಪೀಕಿದವರು ಯಾರ್ಯಾರೆಂದು ಪೊಲೀಸರು ವಿಚಾರಣೆ ಮಾಡಲಿದ್ದಾರೆ.
ಜಗನ್ನಾಥ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯರಾಗಿದ್ದಾರೆ ಹಾಗೂ ಮಂಡ್ಯದಲ್ಲಿ ಶ್ರೀನಿಧಿ ಗೋಲ್ಡ್ ಮಾಲೀಕರಾಗಿದ್ದಾರೆ.