ಪಾಟ್ನಾ: ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಮಾತುಕತೆ ಅಥವಾ ಒಪ್ಪಂದ ಮಾಡಿಕೊಳ್ಳುವುದಿಲ್ಲ ಚುನಾವಣಾ ತಂತ್ರಗಾರಿಕೆಗೆ ಹೆಸರಾಗಿರುವ ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ. ಬಿಹಾರ ರಾಜ್ಯದ ಪ್ರವಾಸ ಮಾಡುತ್ತಿರುವ ಪ್ರಶಾಂತ್ ಕಿಶೋರ್ ಪತ್ರಕರ್ತರೊಂದಿಗೆ ಮಾತನಾಡಿ, ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಜೊತೆ ಹೆಜ್ಜೆ ಹಾಕುವುದಿಲ್ಲ ಎಂದು ಕೈಮುಗಿದು ಹೇಳಿದರು.
2015ರಲ್ಲಿ ನಾವು ಬಿಹಾರದಲ್ಲಿ ಗೆಲುವು ಸಾಧಿಸಿದೆವು. 2017ರಲ್ಲಿ ಪಂಜಾಬ್, 2019ರಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿದೆವು. 11 ವರ್ಷಗಳ ಅವಧಿಯಲ್ಲಿ ನಾವು 2017ರಲ್ಲಿ ಉತ್ತರ ಪ್ರದೇಶದಲ್ಲಿ ಸೋಲು ಅನುಭವಿಸಿದೆವು. ಇದೇ ಕಾರಣಕ್ಕೆ ಇನ್ನೆಂದೂ ಕಾಂಗ್ರೆಸ್ನೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳದಿರುವ ನಿರ್ಣಯ ಮಾಡಲಾಗಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತಷ್ಟು ಪಾತಾಳಕ್ಕೆ ಕುಸಿಯಲಿದೆ. ಅಲ್ಲದೇ ತನ್ನೊಂದಿಗೆ ಇತರರನ್ನೂ ಪಾತಾಳಕ್ಕೆ ತಳ್ಳಲಿದೆ. ಹೀಗಾಗಿ ಆ ಪಕ್ಷದಿಂದ ಅಂತರ ಕಾಯ್ದುಕೊಳ್ಳುವುದೇ ರಾಜಕೀಯ ಪಕ್ಷಗಳಿಗೆ ಸೂಕ್ತ ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ. ನಾನು ಕಾಂಗ್ರೆಸ್ನೊಂದಿಗೆ ಹೋದರೂ ಪಾತಾಳಕ್ಕೆ ಕುಸಿಯಲಿದ್ದೇನೆ ಎಂದು ಪಿಕೆ ಹೇಳಿರುವುದು ಗಮನ ಸೆಳೆದಿದೆ.
ಇತ್ತೀಚಿಗೆ ರಾಜಸ್ಥಾನದಲ್ಲಿ ನಡೆದ ‘ಕಾಂಗ್ರೆಸ್ ಚಿಂತನ್ ಶಿಬಿರ್’ವನ್ನು ಒಂದು ವಿಫಲ ಪ್ರಯತ್ನ ಕರೆದಿರುವ ಪ್ರಶಾತ್ ಕಿಶೋರ್, ಈ ಶಿಬಿರದಿಂದ ಕಾಂಗ್ರೆಸ್ ಸಮಸ್ಯೆಗಳು ಮತ್ತಷ್ಟು ಕಗ್ಗಂಟಾಗಿವೆಯೇ ಹೊರತು ಬಗೆಹರಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ಮುಂಬರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲೂ ಕಾಂಗ್ರೆಸ್ ಸೋಲು ಅನುಭವಿಸಲಿದೆ ಎಂದೂ ಪಿಕೆ ಭವಿಷ್ಯ ನುಡಿದಿದ್ದಾರೆ.
ಇತ್ತೀಚಿಗೆ ಚುನಾವಣಾ ನೀತಿ ತಜ್ಞ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನ ನಡೆದಿತ್ತು. ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಮತ್ತು ಪ್ರಶಾಂತ್ ಕಿಶೋರ್ ನಡುವೆ ಹಲವು ಸುತ್ತಿನ ಮಾತುಕತೆಗಳೂ ನಡೆದಿದ್ದವು. ಆದರೆ ಪಕ್ಷದ ಕುಟುಂಬ ರಾಜಕಾರಣ ನೀತಿಯನ್ನು ಒಪ್ಪದ ಪ್ರಶಾಂತ್ ಕಿಶೋರ್, ತಮಗೆ ಉನ್ನತ ಹುದ್ದೆಯ ಬೇಡಿಕೆಯನ್ನೂ ಮಂಡಿಸಿದ್ದರು.