ಮಂಗಳೂರು: ನಾವು ಒಂದು ಧರ್ಮ, ಜಾತಿಗೆ ಒಂದು ಬೀದಿ ಎಂಬ ಚಿಂತನೆಯನ್ನು ದೂರ ಮಾಡಬೇಕು. ಒಂದು ಧರ್ಮಿಯರ ಕೋಮುವಾದಕ್ಕೆ ಮತ್ತೊಂದು ಧರ್ಮಿಯರ ಕೋಮುವಾದ ಉತ್ತರವಲ್ಲ. ಕೇರಳದಲ್ಲಿ ಹಿಂದೂ ಮುಸ್ಲಿಮರ ಪ್ರತ್ಯೇಕ ಗಲ್ಲಿಗಳು, ಯಾವುದೇ ಜಾತಿಯ ಬೀದಿಗಳು ಇಲ್ಲ. ಎಲ್ಲಾ ರೀತಿಯ ಕೋಮುವಾದದ ವಿರುದ್ಧ ಸಿಪಿಎಂ ಹೋರಾಡುತ್ತದೆ. ಎಲ್ಲಾ ಜಾತಿ ಮತಗಳನ್ನು ಸಿಪಿಎಂ ಗೌರವಿಸುತ್ತದೆ ಎಂದು ಕೇರಳದ ಮಾಜಿ ಸಚಿವ ಕೆ.ಟಿ. ಜಲೀಲ್ ಹೇಳಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ಸಿಪಿಎಂ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ, ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವನ್ನು ಪಾಕಿಸ್ತಾನದಂತಹ ರಾಷ್ಟ್ರವನ್ನಾಗಿಸಲು ನಾವು ಅವಕಾಶವನ್ನು ನೀಡಬಾರದು. ನಮ್ಮ ರಾಷ್ಟ್ರದಲ್ಲಿ ಜಾತ್ಯತೀತೆಯೇ ನಮ್ಮ ಜೀವವಾಯು, ಜಾತ್ಯತೀತತೆ ಇಲ್ಲವಾದರೆ ಭಾರತ ಇಲ್ಲವಾಗುತ್ತದೆ. ನಮ್ಮ ದೇಶ ಜಾತ್ಯತೀತ ರಾಷ್ಟ್ರವಾಗಿದೆ. ಎಲ್ಲವನ್ನು ಭಾರತ ಒಳಗೊಳ್ಳುತ್ತಿದೆ. ಈ ಜಾತ್ಯತೀತತೆಯ ಸಂಪ್ರದಾಯವೇ ಪ್ರಜಾಪ್ರಭುತ್ವವನ್ನು ಕಾಯುತ್ತಿದೆ ಎಂದು ಅಭಿಪ್ರಾಯಪಟ್ಟರು.