ಬೆಂಗಳೂರಿನ ಪ್ರೇಮಿಗಳಿಬ್ಬರು ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಪ್ರೇಮಿಗಳಿಬ್ಬರ ಸಾವಿಗೆ ಪ್ರೀತಿ ನಿರಾಕರಣೆಯೇ ಕಾರಣ ಎನ್ನಲಾಗಿದೆ.
ಕಳೆದ 3 ದಿನಗಳ ಹಿಂದೆಯೇ ನಾಪತ್ತೆ ದೂರು ದಾಖಲಾಗಿತ್ತು. ಯುವತಿ ತಾಯಿ ರತ್ನಮ್ಮ ಹಾಗೂ ಮೃತ ಯುವಕನ ತಂದೆ ವೆಂಕಟರಮನ್ ರಾವ್ ಅವರಿಂದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಇದೀಗ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೇ 19ರಂದು ಇಂಟರ್ವ್ಯೂಗೆ ಹೋಗುತ್ತೇನೆ ಎಂದು ಮೃತ ಯುವತಿ ಜ್ಯೋತಿ (23) ತೆರಳಿದ್ದರು. ಇತ್ತ ಟ್ಯಾಲಿ ಕ್ಲಾಸ್ಗೆ ಹೋಗುತ್ತೇನೆಂದಿದ್ದ ಮೃತ ಯುವಕ ಯಶವಂತ್ ತನ್ನ ಬೈಕ್ನಲ್ಲಿ ತೆರಳಿದ್ದನು. ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಇಬ್ಬರೂ ನಾಪತೆಯಾಗಿರುವುದಾಗಿ ಹೆತ್ತವರು ಪ್ರತ್ಯೇಕವಾಗಿ ದೂರು ದಾಖಲಿಸಿದ್ದರು.
ಜ್ಯೋತಿ ಹಾಗೂ ಯಶವಂತ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರಿಗೂ ತಿಳಿದಿತ್ತು. ಎರಡೂ ಕುಟುಂಬದವರು ಇವರಿಬ್ಬರ ಮದುವೆ ನಿರಾಕರಿಸಿದ್ದರಿಂದ ಓಡಿ ಹೋಗಿ ಮದುವೆ ಆಗುವ ಪ್ಲಾನ್ ಮಾಡಿದ್ದರು. ಅಂದುಕೊಂಡಂತೆ ಮದುವೆಯೂ ಆಗಿತ್ತು. ಈ ಮದುವೆಯನ್ನು ಮನೆಯವರು ತಿರಸ್ಕರಿಸಿದರು. ಇದರಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಪೋಷಕರಿಗೆ ವಾಟ್ಸಾಪ್ನಲ್ಲಿ ಮೆಸೇಜ್ ಮಾಡಿದ್ದಾರೆ. ಇಂದು ಬೆಳಗ್ಗಿನ ಜಾವ 3 ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಮಂಗಳೂರಿಗೆ ತೆರಳಿದ್ದ ಈ ಜೋಡಿ ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರು ಬಾಡಿಗೆ ಪಡೆದಿತ್ತು. ಇದೇ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿಯ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ.