ಸಣ್ಣ ಸಣ್ಣ ಕಾರಣಕ್ಕೆ ಸಾಯಲು ಹೊರಟವರು ಒಮ್ಮೆ ಮೊಹಮ್ಮದ್ ಶಮಿಯ ಕತೆಯನ್ನು ಓದಬೇಕು!

ಮನಸ್ಸಿನಲ್ಲಿ ಸಾವಿರ ನೋವು ಇಟ್ಟುಕೊಂಡು ನಗೋದನ್ನು ಶಮಿಯಿಂದ ಕಲಿಯಬೇಕು!

ಭಾರತೀಯರಿಗೆ ಮೊಹಮ್ಮದ್ ಶಮ್ಮಿ ಅವರ ನಿಜವಾದ ಮೌಲ್ಯವು ಗೊತ್ತಾದದ್ದು ಈ ಬಾರಿಯ ವಿಶ್ವಕಪ್ ಕೂಟದಲ್ಲಿಯೇ! ಅದರಲ್ಲಿಯೂ ನಿನ್ನೆ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ಬೇರೆಲ್ಲಾ ಬೌಲರಗಳು ವಿಕೆಟ್ ಪಡೆಯಲು ಪರದಾಡುತ್ತಿದ್ದಾಗ ಮತ್ತು ದುಬಾರಿಯಾದಾಗ ಬರೋಬ್ಬರಿ ಏಳು ವಿಕೆಟ್ ಪಡೆದು ಆತನು ಭಾರತವನ್ನು ಫೈನಲ್ ಪಂದ್ಯಕ್ಕೆ ಕರೆದುಕೊಂಡು ಹೋದದ್ದನ್ನು ಭಾರತವು ಯಾವತ್ತಿಗೂ ಮರೆಯುವುದಿಲ್ಲ.

ಈ ವಿಶ್ವಕಪ್ ಕೂಟದ ಪ್ರತೀ ಪಂದ್ಯದಲ್ಲಿ ಎಂಬಂತೆ ಅವರು ವಿದೇಶದ ಪ್ರತಿಯೊಬ್ಬ ಬ್ಯಾಟರುಗಳನ್ನು ಕಾಡಿದ್ದಾರೆ. ಅವರ ಸ್ವಿಂಗ್, ಔಟ್ ಸ್ವಿಂಗ್, ರಿವರ್ಸ್ ಸ್ವಿಂಗ್ ಮತ್ತು ಯಾರ್ಕರ್ ಎಸೆತಗಳಿಗೆ ವಿಶ್ವದ ಭಾರೀ ಬಲಿಷ್ಠ ಆಟಗಾರರು ಶರಣಾಗತ ಆದದ್ದು ನಿಜಕ್ಕೂ ಅದ್ಭುತ! ಮೊಹಮದ್ ಶಮಿ ವಿಶ್ವಕಪ್ ಕೂಟದಲ್ಲಿ 50 ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಕೀರ್ತಿ ಪಡೆದಿದ್ದಾರೆ. ಭಾರತಕ್ಕೆ ಕಪಿಲ್ ದೇವ್ ನಂತರ ದೊರೆತ ಅತ್ಯುತ್ತಮ ವೇಗದ ಬೌಲರ್ ಅವರು ಎಂಬುದನ್ನು ನಾವು ಒಪ್ಪದೇ ಇರಲು ಸಾಧ್ಯವೇ ಇಲ್ಲ!

ಅಂತಹ ಶಮ್ಮಿ ಸಾಗಿ ಬಂದ ದಾರಿ..

ಮೊಹಮ್ಮದ್ ಶಮ್ಮಿ ಬದುಕಿನ ಹಿನ್ನೆಲೆಯನ್ನು ಒಮ್ಮೆ ಗಮನಿಸಿದಾಗ ನೀವು ಖಂಡಿತಾ ಆತನನ್ನು ಹೆಚ್ಚು ಪ್ರೀತಿ ಮಾಡುತ್ತೀರಿ.

1990 ಸೆಪ್ಟೆಂಬರ್ 3ರಂದು ಉತ್ತರ ಪ್ರದೇಶದ ಆಮ್ರೋಹ ಪ್ರದೇಶದ ಒಂದು ಹಳ್ಳಿಯಲ್ಲಿ ಒಬ್ಬ ರೈತನ ಮಗನಾಗಿ ಜನಿಸಿದ ಆತನು ಬಡತನ, ಹಸಿವು, ಅಪಮಾನ ಎಲ್ಲವನ್ನೂ ದಾಟಿಕೊಂಡು ಬರಬೇಕಾಯಿತು. 15 ವರ್ಷ ಪ್ರಾಯದಲ್ಲಿ ಬದ್ರುದ್ದೀನ್ ಸಿದ್ದೀಕ್ ಎಂಬ ಕೋಚ್ ಆತನ ಪ್ರತಿಭೆಯನ್ನು ಗುರುತಿಸಿ ತರಬೇತು ಕೊಡಲು ಆರಂಭ ಮಾಡಿದ್ದರು.

ಮೊಹಮ್ಮದ್ ಶಮ್ಮಿ ಬಾಲ್ಯದಿಂದಲೂ ಕಠಿಣ ಪರಿಶ್ರಮದ ಹಾಗೂ ದುಡಿಮೆಯ ಮೇಲೆ ನಂಬಿಕೆಯನ್ನು ಇಟ್ಟ ಹುಡುಗ. ಕೋಚ್ ಹೇಳಿದ ಎಲ್ಲ ಕೌಶಲಗಳನ್ನು ಅತೀವ ಶ್ರದ್ಧೆಯಿಂದ ಕಲಿಯುತ್ತಾ ಹೋದ ಶಮ್ಮಿಯ ಕನಸು ಅಂಡರ್ 19 ವಿಶ್ವ ಕೂಟದಲ್ಲಿ ಭಾರತಕ್ಕೋಸ್ಕರ ಆಡುವುದಾಗಿತ್ತು. ಆಗಲೇ ಆತನ ಬೌಲಿಂಗ್ ವೇಗ 140km/h ದಾಟಿತ್ತು ಮತ್ತು ಹೆಚ್ಚಿನ ವಿಕೆಟ್ ಬೌಲ್ಡ್ ಮಾಡಿ ಪಡೆಯುತ್ತಿದ್ದರು. ಆತನಿಗೆ ಯಾವ ಪ್ರಾಯೋಜಕರೂ ಇರಲಿಲ್ಲ. ಒಂದು ಹೊತ್ತಿನ ಊಟಕ್ಕೂ ಆತ ಪರದಾಡುವ ಸ್ಥಿತಿ ಇತ್ತು. ಆದರೆ ಭಾರತದ ಕ್ರಿಕೆಟ್ ರಾಜಕೀಯವು ಶಮ್ಮಿಯ ಅಂಡರ್ 19 ಕನಸನ್ನು ನುಚ್ಚುನೂರು ಮಾಡಿತ್ತು!

ಆಗ ಆತನ ಕೋಚ್ ಆತನ ಪ್ರತಿಭೆ ಸಾಯಬಾರದು ಎಂಬ ಕಾರಣಕ್ಕೆ ಯಾರದೋ ಅಡ್ರೆಸ್ ಹುಡುಕಿ ಆತನನ್ನು ಕೊಲ್ಕತ್ತಾಗೆ ಕರೆದುಕೊಂಡು ಬಂದರು. ಅವಕಾಶಗಳಿಗಾಗಿ ಶಮ್ಮಿ ಯಾರ್ಯಾರ ಮನೆಬಾಗಿಲು ಬಡಿಯಬೇಕಾಯಿತು.

‘ಹಸಿವನ್ನಾದರೂ ತಡೆಯಬಹುದು. ಆದರೆ ಅಪಮಾನಗಳ ಅಗ್ನಿದಿವ್ಯ ತಡೆಯುವುದು ಕಷ್ಟ ‘ ಎಂದು ಶಮ್ಮಿ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಹೆಚ್ಚು ಶಾಲೆ ಓದಿಲ್ಲ ಎಂಬ ಕಾರಣಕ್ಕೆ ಕೂಡ ಆತನು ಹಲವು ಬಾರಿ ಬಿಸಿಸಿಐ ಮತ್ತು ಆಯ್ಕೆ ಮಂಡಳಿಯ ಅವಕೃಪೆಗೆ ಪಾತ್ರ ಆಗಬೇಕಾಯಿತು ಅಂದರೆ ನೀವು ನಂಬಲೇಬೇಕು.

ಶಮ್ಮಿ ಬದುಕಿನ ಕರಾಳ ಅಧ್ಯಾಯ ಆರಂಭ ಆದದ್ದು ಮದುವೆಯಿಂದ!

ಶಮ್ಮಿ 2014ರಲ್ಲಿ ಹಸೀನ್ ಜಹಾನ್ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾದರು. ಒಂದು ಮಗು ಕೂಡ ಜನಿಸಿತು. ಆದರೆ ಅದೇ ಹಸೀನ್ ಜಹಾನ್ ಆತನ ಬದುಕಿನ ವಿಲನ್ ಆದದ್ದು ದುರಂತ. ಸ್ವತಃ ಹೆಂಡತಿ ಆತನ ಮೇಲೆ ಲೈಂಗಿಕ ಹಿಂಸೆ ಮತ್ತು ವ್ಯಭಿಚಾರದ ಕೇಸ್ ದಾಖಲಿಸಿದಳು! ತನ್ನ ಗಂಡನ ಮಾನಸಿಕ ಆರೋಗ್ಯವು ಸರಿ ಇಲ್ಲ ಎಂಬ ಆರೋಪ. ಎಲ್ಲದಕ್ಕೂ ನನ್ನ ಹತ್ತಿರ ಸಾಕ್ಷಿ ಇದೆ ಎನ್ನುವ ಧಿಮಾಕು! ಶಮ್ಮಿ ಬದುಕಿನ ಅತ್ಯಂತ ಕರಾಳ ದಿನಗಳವು. ಒಮ್ಮೆ ವಿದೇಶದ ಪ್ರವಾಸದಲ್ಲಿ ಇದ್ದಾಗ 2018ರಲ್ಲಿ ಆತನ FIR ಆಗಿ ಅರೆಸ್ಟ್ ವಾರಂಟ್ ಹೊರಟಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಶಮ್ಮಿ ಅರೆಸ್ಟ್ ಆಗುವುದು ತಪ್ಪಿತು.

ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನ!

ಈ ಸಂದರ್ಭದಲ್ಲಿ ತಾನು ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೇನೆ ಎಂದು ಶಮ್ಮಿ ಒಪ್ಪಿಕೊಂಡಿದ್ದಾರೆ. ಕ್ರಿಕೆಟ್ ಮೇಲೆ ಫೋಕಸ್ ಔಟ್ ಆಗಿತ್ತು. ತಾನು ನಿರಪರಾಧಿ ಎಂದು ಎಷ್ಟೇ ಬಾರಿ ಕೂಗಿ ಹೇಳಿದರೂ ಆತನನ್ನು ಯಾರೂ ನಂಬಲಿಲ್ಲ. ನಿರಂತರ ಕೋರ್ಟ್ ವಿಚಾರಣೆ, ಪೊಲೀಸ್ ಸ್ಟೇಶನ್ ಅಲೆದಾಟ ಶಮ್ಮಿಯನ್ನು ಹೈರಾಣ ಮಾಡಿತ್ತು. ಆಗ ವಿರಾಟ್ ಕೊಹ್ಲಿಯಂತಹ ಸ್ನೇಹಿತರು ಆತನ ಪರವಾಗಿ ನಿಂತು ನೈತಿಕ ಬೆಂಬಲ ನೀಡಿದ್ದನ್ನು ಆತನು ಇಂದಿಗೂ ಮರೆತಿಲ್ಲ. ಆ ಕೇಸಿನಿಂದ ಹೊರಬರಲು ಶಮ್ಮಿಗೆ ತುಂಬಾ ಕಷ್ಟ ಆಯಿತು. ಶಮ್ಮಿ ತುಂಬಾ ಜರ್ಜರಿತ ಆದರು.

ಮ್ಯಾಚ್ ಫಿಕ್ಸಿಂಗ್ ಎಂಬ ಬೆಂಬಿಡದ ಭೂತ!

‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ’ ಎಂಬ ಗಾದೆ ಮಾತಿನಂತೆ ಶಮ್ಮಿ ಬದುಕಿನಲ್ಲಿ ಎರಡನೇ ಬಿರುಗಾಳಿ ಬೀಸಿತ್ತು. ಅದು ‘ಮ್ಯಾಚ್ ಫಿಕ್ಸಿಂಗ್’ ಆರೋಪ! ದುಡ್ಡು ತೆಗೆದುಕೊಂಡು ವಿದೇಶಗಳ ತಂಡಕ್ಕೆ ಫೇವರ್ ಮಾಡಿದ್ದಾರೆ ಎನ್ನುವ ದೂರು ಬಂದಾಗ ಒಮ್ಮೆಗೇ ಶಮ್ಮಿ ಕುಗ್ಗಿಹೋದರು. ಅವರಂತಹ ದೇಶಪ್ರೇಮಿ ಕ್ರಿಕೆಟರನಿಗೆ ಆ ಆರೋಪವು ಸಾವಿಗೆ ಸಮ ಆಗಿತ್ತು. ಬಿಸಿಸಿಐ ಆತನ ಯಾವ ಮಾತನ್ನೂ ಕೇಳದೆ ವಿಚಾರಣಾ ಸಮಿತಿ ರಚನೆ ಮಾಡಿತು. ಪತ್ರಿಕೆಗಳು ಆತನ ವಿರುದ್ಧ ಬರೆದವು. ಹೆಂಡತಿಯ ಕಡೆಯವರು ಆತನ್ನು ಬಹಿರಂಗವಾಗಿ ನಿಂದಿಸಿದರು. ಆಗಲೂ ಆತನ ಪರವಾಗಿ ನಿಂತವರು ವಿರಾಟ್ ಮೊದಲಾದ ಸ್ನೇಹಿತರೇ. ಈ ಆರೋಪವೂ ಮುಂದೆ ಸುಳ್ಳು ಎಂದು ಸಾಬೀತಾಯಿತು. ಆ ಹಂತದಲ್ಲಿ ಶಮ್ಮಿ ಕ್ರಿಕೆಟ್ ಬಿಟ್ಟು ಹೋಗುವ ತೀರ್ಮಾನಕ್ಕೆ ಬಂದಿದ್ದರು. ಆಗಲೂ ನೆರವಿಗೆ ನಿಂತವರು ಚಿನ್ನದಂತಹ ಗೆಳೆಯರೇ!

ನಿಂದನೆಗೆ ನಿಂತ ಟ್ರೊಲ್ ಪೇಜಗಳು!

2021 ಅಕ್ಟೋಬರ್ ಹೊತ್ತಿಗೆ ಶಮ್ಮಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಒಬ್ಬರೇ ಮುಸ್ಲಿಂ ಆಟಗಾರ ಆಗಿದ್ದರು. ಆಗ ಪಾಕಿಸ್ತಾನದ ವಿರುದ್ಧ ಭಾರತವು ಟಿ 20 ಪಂದ್ಯದಲ್ಲಿ ಸೋತಿತ್ತು. ದುರ್ದೈವ ಏನೆಂದರೆ ಶಮ್ಮಿ 43 ರನ್ ಕೊಟ್ಟು ದುಬಾರಿ ಆಗಿದ್ದರು. ಯಾವುದೇ ಒಬ್ಬ ಆಟಗಾರ ಎಲ್ಲಾ ಪಂದ್ಯಗಳನ್ನೂ ಗೆಲ್ಲಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ನಮಗೆ ಅರ್ಥ ಆಗಬೇಕು ಅಲ್ವಾ? ಕೆಲವು ವಿಕೃತ ಮನಸ್ಸಿನ ಮಂದಿ ಶಮ್ಮಿ ವಿರುದ್ಧ ಟ್ರೊಲ್ ಪುಟಗಳನ್ನು ತೆರೆದರು ಮತ್ತು ಟ್ರೊಲ್ ಆರಂಭ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ನಿರಂತರ ನಿಂದನೆ ನಡೆಯಿತು. ಭಾರತ ಪಾಕ್ ಪಂದ್ಯಗಳಿಗೆ ಹೈಪ್ ಕ್ರಿಯೇಟ್ ಮಾಡುವ ಕೆಲವು ಮಾಧ್ಯಮಗಳು
‘ಯಾವ ಹುತ್ತದಲ್ಲಿ ಯಾವ ಹಾವೋ! ಯಾರಿಗ್ಗೊತ್ತು?’ ಮೊದಲಾದ ಶೀರ್ಷಿಕೆಯನ್ನು ನೀಡಿ ಆತನ ತೇಜೋವಧೆಗೆ ಇಳಿದವು. ಆಗಲೂ ಶಮ್ಮಿ ಪರವಾಗಿ ನಿಂತವರು ವಿರಾಟ್ ಅಂತಹ ಗೆಳೆಯರೇ! ಈ ಅಗ್ನಿದಿವ್ಯವನ್ನು ಗೆಲ್ಲುವುದು
ಶಮ್ಮಿಗೆ ತುಂಬಾ ಕಷ್ಟ ಆಯಿತು.

ಅದೇ ಶಮ್ಮಿ ಇಂದು ಭಾರತಕ್ಕೆ ಚಿನ್ನದಂತಹ ಬೌಲರ್ ಆಗಿದ್ದಾರೆ.

ಶಮ್ಮಿ ಜಾಗದಲ್ಲಿ ಬೇರೆ ಯಾರಿದ್ದರೂ ಕ್ರಿಕೆಟಿಗೆ ವಿದಾಯ ಹೇಳಿ ಓಡಿಹೋಗುತ್ತಿದ್ದರು. ಆದರೆ ಮೊಹಮ್ಮದ್ ಶಮ್ಮಿ ಈ ಸಾಲು ಸಾಲು ಅಗ್ನಿಪರೀಕ್ಷೆಗಳ ನಡುವೆ ಕ್ರಿಕೆಟ್ ಬಿಟ್ಟು ಹೋಗಿಲ್ಲ ಅನ್ನುವುದು ಭಾರತದ ಭಾಗ್ಯ. ಇಂತಹ ದೈತ್ಯ ಪ್ರತಿಭೆ ಇದ್ದರೂ ಆತನಿಗೆ ಕ್ರಿಕೆಟ್ ಆಯ್ಕೆ ಮಂಡಳಿಯು ತೋರಿದ ಅವಕೃಪೆ, ಮಾಡಿದ ಅನ್ಯಾಯ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನಗುನಗುತ್ತ ಭಾರತವನ್ನು ಪ್ರತೀ ಪಂದ್ಯದಲ್ಲಿಯೂ ಗೆಲ್ಲಿಸುವುದು ಇದೆಯಲ್ಲ, ಯಾವ ಬಂಜರು ಕ್ರಿಕೆಟ್ ಪಿಚ್ಚಿನಲ್ಲಿಯೂ ಸ್ವಿಂಗ್ ಪಡೆದು ಭಾರತದ ನೆರವಿಗೆ ನಿಲ್ಲುವುದಿದೆಯಲ್ಲಾ ಆ ಕಾರಣಕ್ಕಾದರೂ ನೀವು ಶಮ್ಮಿಗೆ ಹ್ಯಾಟ್ಸಾಫ್ ಹೇಳಬೇಕು!

ಅದರಲ್ಲಿಯೂ ಬೇರೆ ಬೇರೆ ಕ್ರಿಕೆಟರುಗಳ ಹೆಂಡತಿಯರು ಮ್ಯಾಚ್ ನೋಡಲು ಬಂದು ತಮ್ಮ ಗಂಡಂದಿರ ನೆರವಿಗೆ ನಿಲ್ಲುತ್ತಿರುವಾಗ, ಒಂದಿಷ್ಟೂ ಬೇಜಾರು ಮಾಡದೆ ಪ್ರತೀ ವಿಕೆಟ್ ಪಡೆದು ಆಕಾಶ ನೋಡುವ ಶಮ್ಮಿಯ ನೋವು ನಮಗೆ ಅರ್ಥ ಆದರೆ ಸಾಕು!

  • ರಾಜೇಂದ್ರ ಭಟ್ ಕೆ.

By admin

Leave a Reply

Your email address will not be published. Required fields are marked *

error: Content is protected !!