ಮಂಗಳೂರು: ಬೆಳ್ತಂಗಡಿ ತಾಲೂಕು ಪುದುವೆಟ್ಟು ನಿವಾಸಿ ಯುವ ಕಬಡ್ಡಿ ಆಟಗಾರ ಸ್ವರಾಜ್(24) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸ್ವರಾಜ್ ತನ್ನ ವಾಟ್ಸಾಪ್ನಲ್ಲಿ ಅಕ್ಕನ ಮಗಳ ಫೋಟೋ ಹಾಕಿದ್ದ. ಈ ಫೋಟೋವನ್ನು ಲೋನ್ ಆ್ಯಪ್ನವರು ‘Baby for sale’ಎಂದು ಎಡಿಟ್ ಮಾಡಿ ಸ್ವರಾಜ್ ಸ್ನೇಹಿತರು, ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫಾರ್ವರ್ಡ್ ಮಾಡಲಾಗಿತ್ತು.
ಈ ರೀತಿಯ ಬ್ಲಾಕ್ ಮೇಲ್ ತಡೆಯಲಾಗದೇ ಆಗಸ್ಟ್ 30 ರಂದು 30 ಸಾವಿರ ರೂಪಾಯಿ ಕಟ್ಟಿದ್ದ. ಆದರೂ ಇನ್ನಷ್ಟು ಹಣ ಕೊಡಬೇಕೆಂದು ಆ.31 ರಂದು ಮಧ್ಯಾಹ್ನ 2 ಗಂಟೆಗೆ ಡೆಡ್ ಲೈನ್ ನೀಡಿಲಾಗುತ್ತು. ಇದರಿಂದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಈ ಕುರಿತು ಧರ್ಮಸ್ಥಳ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಪುದುವೆಟ್ಟು ನಿವಾಸಿ ಸ್ವರಾಜ್(24) ಆಗಸ್ಟ್ 31ರಂದು ಸ್ನಾನದ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಉಜಿರೆಯ ಸಾನಿಧ್ಯ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ಸ್ವರಾಜ್. ಜಿಲ್ಲಾ ಮಟ್ಟವನ್ನು ಕಬ್ಬಡ್ಡಿಯಲ್ಲಿ ಪ್ರಸಿದ್ದಿಯಾಗಿದ್ದ.
ಆದರೆ ಇದೀಗ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.