ಮುಲ್ಕಿ : ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಸ್ಕೂಟರ್ ಗೆ ಟ್ಯಾಂಕರ್ ಡಿಕ್ಕಿಯಾಗಿ ದಂಪತಿಗಳು ಸಾವನ್ನಪ್ಪಿದ ದಾರುಣ ಘಟನೆ ಇಂದು ಮಂಗಳವಾರ ಮದ್ಯಾಹ್ನ ನಡೆದಿದೆ.
ಮೃತ ದುರ್ದೈವಿಗಳನ್ನು ತೀರ್ಥಹಳ್ಳಿ ಕೋಳಿ ಕಾಲು ಗುಡ್ಡೆ ನಿವಾಸಿಗಳಾದ ಅಕ್ಬರ್ ಭಾಷಾ (61) ಹಾಗೂ ಖತೀಜಾ ಬಿ (46) ಎಂದು ಗುರುತಿಸಲಾಗಿದೆ.
ಮೃತ ದಂಪತಿಗಳು ತೀರ್ಥಹಳ್ಳಿಯಿಂದ ಮಂಗಳೂರಿನ ಪಾಸ್ಪೋರ್ಟ್ ಕಚೇರಿಗೆ ಪಾಸ್ ಪೋರ್ಟ್ ಮಾಡಿಸಲೆಂದು ಮುಂಜಾನೆ ತಮ್ಮ ಸ್ಕೂಟರ್ ನಲ್ಲಿ ಹೊರಟಿದ್ದು ಮುಲ್ಕಿಯ ಬಪ್ಪನಾಡು ಸೇತುವೆ ಬಳಿ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಸ್ಕೂಟರ್ ನಲ್ಲಿದ್ದ ದಂಪತಿಗಳು ಎಸೆಯಲ್ಪಟ್ಟಿದ್ದು ಅವರ ಮೇಲೆ ಲಾರಿಯ ಚಕ್ರ ಚಲಿಸಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಅಪಘಾತದ ಭೀಕರ ದೃಶ್ಯ ಮನ ಕಲಕುವಂತಿತ್ತು. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿದ್ದಾರೆ.