ಉಡುಪಿ: ನೀರಿನ ಸಮಸ್ಯೆಯಿದ್ದ ಪರಿಸರದಲ್ಲಿ ದೈವ ತೋರಿಸಿದ್ದ ಜಾಗದಲ್ಲೇ ಬೋರ್ವೆಲ್ ಕೊರೆದಾಗ ಆಗಸದೆತ್ತರಕ್ಕೆ ನೀರು ಕಾರಂಜಿಯಂತೆ ಚಿಮ್ಮಿದ ಪವಾಡಸದೃಶ ಘಟನೆ ಉಡುಪಿಯಲ್ಲಿ ನಡೆದಿದೆ. ಕರಾವಳಿಯ ದೈವ, ದೇವರ ಕಾರಣಿಕದ ನಿದರ್ಶನ ಇಂದಿಗೂ ಹಲವು ಕಡೆಗಳಲ್ಲಿ ಗೋಚರವಾಗುತ್ತಿರುವುದು ಭಕ್ತರ ನಂಬಿಕೆಗೆ ಇಂಬು ನೀಡುತ್ತಿದೆ. ಇದೀಗ ಉಡುಪಿಯಲ್ಲಿ ದೈವದ ಕಾರಣಿಕವೊಂದು ಭಕ್ತರಿಗೆ ಗೋಚರವಾಗಿದೆ.
ಉಡುಪಿಯ ಕಸ್ತೂರ್ಬಾ ನಗರ ಚಿಟ್ಪಾಡಿಯಲ್ಲಿರುವ ಬಬ್ಬುಸ್ವಾಮಿ ಪರಿಸರದಲ್ಲಿ ನೀರಿನ ಸಮಸ್ಯೆ ಕಾಡುತ್ತಿತ್ತು. ಇದರಿಂದ ದೈವಸ್ಥಾನದ ನೀರಿನ ಸಮಸ್ಯೆ ಕೊನೆಗಾಣಿಸಲು ಶ್ರೀ ದೈವರಾಜ ಬಬ್ಬುಸ್ವಾಮಿಗೆ ಸಮಿತಿ ದರ್ಶನ ಸೇವೆ ನೀಡಿ ಪ್ರಾರ್ಥನೆ ಮಾಡಿತ್ತು. ದರ್ಶನ ಸೇವೆ ಸಂದರ್ಭದಲ್ಲಿ ಬಬ್ಬು ಸ್ವಾಮಿ ನೀರಿನ ಸೆಲೆ ಇರುವ ಜಾಗವನ್ನು ತೋರಿಸಿತ್ತು. ಬಳಿಕ ಸಮಿತಿ ಪ್ರಮುಖರು ಇದೇ ಜಾಗದಲ್ಲಿ ಬೋರ್ವೆಲ್ ಕೊರೆಸಿದ್ದರು. ದೈವ ತೋರಿಸಿದ ಜಾಗದಲ್ಲೇ ಬೋರ್ವೆಲ್ ಕೊರದಾಗ ನೀರು ಚಿಮ್ಮಿತು. ಈ ಸಂದರ್ಭ ಭಕ್ತರು ಸಂತೋಷದಲ್ಲಿ ಕುಣಿದಾಡಿದ್ದಾರೆ. ಈ ಮೂಲಕ ನಂಬಿದವರಿಗೆ ಇಂಬು ನೀಡುವ ಬಬ್ಬು ಸ್ವಾಮಿ ಕಾರಣಿಕ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ನೀರು ಚಿಮ್ಮಿದಾಗ ಭಕ್ತರು ಸಂತೋಷದಿಂದ ಕುಣಿದಾಡುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.