ಉಡುಪಿ: ಪತಿಯೊಬ್ಬ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ್ ಕುಂದಾಪುರದ ಹೆಮ್ಮಾಡಿಯ ದೇವಲ್ಕುಂದ ಎಂಬಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪೂರ್ಣಿಮಾ(38) ಹಾಗೂ ಆತ್ಮಹತ್ಯೆಗೈದ ಪತಿ ರವಿ ಆಚಾರ್ಯ(42) ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ ರವಿ, ಕುಟುಂಬವೊಂದರ ಸೀಮಂತ ಕಾರ್ಯಕ್ರಮಕ್ಕೆ ಪತ್ನಿಯನ್ನು ಶಿವಮೊಗ್ಗದಿಂದ ಕರೆಸಿಕೊಂಡಿದ್ದ, ಅಂದು ರಾತ್ರಿ ಪತಿ ಮನೆಯಲ್ಲಿ ಉಳಿದಿದ್ದ ಪತ್ನಿಯ ಜೊತೆ ಗಲಾಟೆ ನಡೆದಿದ್ದು, ಆಗ ಕೋಪದಿಂದ ಕಬ್ಬಿಣದ ಪ್ಲೇಟ್ನಿಂದ ಪತ್ನಿಯನ್ನು ಕೊಲೆಗೈದು ಬಳಿಕ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೊಲೆಯಾದ ಮಹಿಳೆ ಪೂರ್ಣಿಮಾ ಆಚಾರ್ಯ ಮೂಲತಃ ಶಿವಮೊಗ್ಗದ ಸೊರಬ ನಿವಾಸಿಯಾಗಿದ್ದು, ಹದಿನಾರು ವರ್ಷದ ಹಿಂದೆ ಕೋಗಾರ್ ಮೂಲದ ರವಿ ಆಚಾರ್ಯರನ್ನು ವಿವಾಹವಾಗಿದ್ದರು. ಅತಿಯಾದ ಕುಡಿತದ ಚಟ ಹೊಂದಿರುವ ರವಿ ಕುಡಿದು ಪತ್ನಿ ಹಾಗೂ ಮಕ್ಕಳ ಜೊತೆ ಗಲಾಟೆ ಮಾಡುತ್ತಿದ್ದನು. ಇದರಿಂದ ನೊಂದ ಪೂರ್ಣಿಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆ ಸೊರಬದಲ್ಲಿ ನೆಲೆಸಿದ್ದರು.
ಆದ್ರೆ ನಿನ್ನೆ ಸಂಬಂಧಿಕರ ಸೀಮಂತ ಕಾರ್ಯಕ್ರಮಕ್ಕೆ ಪತ್ನಿಯನ್ನು ಶಿವಮೊಗ್ಗದಿಂದ ಮನೆಗೆ ಕರೆಸಿಕೊಂಡು ಜಗಳವಾಡಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.