ಚೆನ್ನೈ : ದಲಿತ ಯುವತಿಯೊಬ್ಬಳ ಮೇಲೆ ಎಂಟು ದುಷ್ಕರ್ಮಿಗಳು ಅತ್ಯಾಚಾರಗೈದಿರುವ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
22 ವರ್ಷದ ದಲಿತ ಯುವತಿಯನ್ನು ಬೆದರಿಸಿ, ಆರು ತಿಂಗಳಿಂದ ಅತ್ಯಾಚಾರ ಎಸಗಲಾಗಿದೆ. ಇಬ್ಬರು ಡಿಎಂಕೆ ಕಾರ್ಯಕರ್ತರು ಸೇರಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ನಾಲ್ಕು ಬಾಲಕರು ಕೂಡ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಡಿಎಂಕೆ ಯುವ ಘಟಕದ ಪದಾಧಿಕಾರಿ ಹರಿಹರನ್ ಪ್ರಕರಣದ ಮುಖ್ಯ ಆರೋಪಿ. ಯುವತಿ ವಾಸವಾಗಿದ್ದ ಮನೆಯ ಹತ್ತಿರದಲ್ಲಿಯೇ ಹರಿಹರನ್ನ ಮಳಿಗೆ ಇದ್ದು, ಮೊದಲಿಗೆ ಆಕೆಗೆ ಪ್ರೇಮ ಸಂಬಂಧದ ಆಮಿಷವೊಡ್ಡಿದ್ದಾನೆ. ನಂತರದಲ್ಲಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು, ಅದನ್ನು ವೀಡಿಯೋ ಮಾಡಿ ತನ್ನ ಸ್ನೇಹಿತರ ಮೊಬೈಲ್ಗೆ ಹರಿಬಿಟ್ಟಿದ್ದಾನೆ. ನಂತರದಲ್ಲಿ ಆರೋಪಿ ಮತ್ತು ಅವನ ಸ್ನೇಹಿತರು ಸಂತ್ರಸ್ತೆಗೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ 6 ತಿಂಗಳು ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಸದ್ಯ ಎಂಟು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.