ಕೊಚ್ಚಿ: ಕೇರಳದ ವಿಸ್ಮಯ ನಾಯರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಕಿರಣ್ ಕುಮಾರ್ ಅಪರಾಧಿ ಎಂದು ಕೋರ್ಟ್ ಹೇಳಿದೆ. ಜೂನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ವಿ ನಾಯರ್ ರ ಪತಿಯನ್ನು ಕೇರಳದ ನ್ಯಾಯಾಲಯವು ವರದಕ್ಷಿಣೆ ಕಿರುಕುಳ ಸಾವಿನ ಪ್ರಕರಣದಲ್ಲಿ ಅಪರಾಧಿ ಎಂದು ಸೋಮವಾರ ತೀರ್ಪು ನೀಡಿದೆ ಎಂದು ತಿಳಿದು ಬಂದಿದೆ.
ವಿಸ್ಮಯಾ ಮರಣದ ಒಂದು ವರ್ಷದ ನಂತರ, ಆಕೆಯ ಪತಿ ಕಿರಣ್ ಕುಮಾರ್ ಅಪರಾಧಿ ಎಂದು ಘೋಷಿಸಲಾಗಿದೆ. ಕೊಲ್ಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸುಜಿತ್ ಕೆ. ಎನ್. ಐಪಿಸಿಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 498 ಎ (ಗಂಡ ಅಥವಾ ಸಂಬಂಧಿಕರಿಂದ ಕ್ರೌರ್ಯ), ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಕಿರಣ್ ಅವರನ್ನು ಅಪರಾಧಿ ಎಂದು ತೀರ್ಪು ನೀಡಿದ್ದಾರೆ. ಸುಪ್ರೀಂ ಕೋರ್ಟ್ ನೀಡಿದ ಜಾಮೀನನ್ನು ನ್ಯಾಯಾಲಯವು ರದ್ದುಗೊಳಿಸಿದೆ.
ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ಪ್ರಕಟಿಸಲಾಗುವುದು. ಮೇ 17ರಂದು ಪ್ರಕರಣದ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತ್ತು. ಸೋಮವಾರ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ ಮೋಹನರಾಜ್ ಅವರು ಅಪರಾಧಿ ಕುಮಾರ್ಗೆ ಗರಿಷ್ಠ ಶಿಕ್ಷೆಯನ್ನು ವಿಧಿಸುವಂತೆ ಪ್ರಾಸಿಕ್ಯೂಷನ್ ಕೋರುತ್ತದೆ ಎಂದು ಹೇಳಿದರು. ವಿಸ್ಮಯಾ ಅವರ ತಂದೆ ತ್ರಿವಿಕ್ರಮನ್ ನಾಯರ್ ತಮ್ಮ ಮಗಳಿಗೆ ನ್ಯಾಯ ಸಿಕ್ಕಿದೆ ಎಂದು ನ್ಯಾಯಾಲಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಬ್ಯಾಚುಲರ್ ಆಫ್ ಆಯುರ್ವೇದ ಮೆಡಿಸಿನ್ಸ್ ಮಾಡುತ್ತಿದ್ದ ವಿಸ್ಮಯಾ ವಿ. ನಾಯರ್ ಜೂನ್ 21, 2021 ರಂದು ಕೊಲ್ಲಂನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಕೆಗೆ 22 ವರ್ಷ ವಯಸ್ಸಾಗಿತ್ತು. ಕೊಲ್ಲಂ ಜಿಲ್ಲೆಯ ಕಡಕ್ಕಲ್ ಬಳಿಯ ನಿಲಮೇಲ್ ಮೂಲದ ಅವರು ವರದಕ್ಷಿಣೆಯ ಭಾಗವಾಗಿ ನೀಡಿದ ಕಾರಿಗೆ ತನ್ನ ಪತಿ ಅನೇಕ ಬಾರಿ ಕ್ರೂರವಾಗಿ ಥಳಿಸಿದ್ದಾನೆ ಎಂದು ತನ್ನ ಸೋದರ ಸಂಬಂಧಿಗೆ ಸಂದೇಶಗಳನ್ನು ಕಳುಹಿಸಿದ ಎರಡು ದಿನಗಳ ನಂತರ ಆಕೆಯ ಸಾವು ಸಂಭವಿಸಿತ್ತು. ಸುಮಾರು ನಾಲ್ಕು ತಿಂಗಳ ಕಾಲ ವಿಚಾರಣೆ ನಡೆಯುತ್ತಿದ್ದು, ವಿಸ್ಮಯಾ ಸಾವನ್ನಪ್ಪಿ 11 ತಿಂಗಳ ನಂತರ ಈಗ ತೀರ್ಪು ಬಂದಿದೆ.