ಮಂಗಳೂರು: ಶಾಲಾ ಶಿಕ್ಷಕಿಯೊಬ್ಬರು ಅಯೋಧ್ಯಾ ರಾಮ ಮಂದಿರ ಹಾಗೂ ಶ್ರೀರಾಮನನ್ನು ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿಯೊಬ್ಬರು ಶ್ರೀರಾಮನನ್ನು ಅವಹೇಳನ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಶಾಲೆಯ ಏಳನೇ ತರಗತಿ ಮಕ್ಕಳಿಗೆ ವರ್ಕ್ ಈಸ್ ವರ್ಶಿಪ್ ಎನ್ನುವ ಪಠ್ಯವಿದ್ದು, ಅದರ ನೆಪದಲ್ಲಿ ಹಿಂದು ಧರ್ಮವನ್ನು ನಿಂದಿಸಿ ತರಗತಿಯಲ್ಲಿ ಬೋಧನೆ ಮಾಡಿ, ಶ್ರೀರಾಮನನ್ನು ಅವಹೇಳನ ಮಾಡಿದ್ದಾರೆಂದು ತಿಳಿದುಬಂದಿದೆ.
ಹಿಂದುಗಳಿಗೆ ಅಸ್ತಿತ್ವ ಇಲ್ಲ. ಭಾರತದಲ್ಲಿ ಮಾತ್ರ ಹಿಂದುಗಳಿದ್ದಾರೆ. ಹಿಂದುಗಳ ಹುಟ್ಟು ಎಲ್ಲಿಂದಲೇ ಇವರಿಗೆ ತಿಳಿದಿಲ್ಲ. ಅಯೋಧ್ಯೆಯಲ್ಲಿ ಕಲ್ಲಿನ ಮೂರ್ತಿ ಮಾಡಿ ಇಟ್ಟ ಕೂಡಲೇ ಅಲ್ಲಿಗೆ ರಾಮ ಬರುತ್ತಾನೆಯೇ..? ಮಸೀದಿಯನ್ನು ಒಡೆದು ಡೆಕೋರೇಶನ್ ಮಾಡಿ ಮಂದಿರ ಕಟ್ಟಬೇಕಿತ್ತೇ.? ರಾಮಾಯಣ, ರಾಮ ಎಲ್ಲ ಕಾಲ್ಪನಿಕ. ಅದನ್ನು ಹೇಗೆ ನಂಬುತ್ತೀರಿ ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಮಕ್ಕಳಲ್ಲಿ ಹಿಂದು ಧರ್ಮದ ಬಗ್ಗೆ ಅಪನಂಬಿಕೆ ಬರುವ ರೀತಿ ಮಾಡಿದ್ದಾರೆಂದು ಪೋಷಕರೊಬ್ಬರು ಆರೋಪಿಸಿದ್ದಾರೆ.