ಪುತ್ತೂರು: ಪುತ್ತೂರಿನ ಮಹಿಳೆಯೊಬ್ಬರು ಉದ್ಯೋಗ ನಿಮಿತ್ತ ಕುವೈಟ್‌ಗೆ ತೆರಳಿದ್ದು ಅಲ್ಲಿ ಅವರನ್ನು ಸಂಸ್ಥೆಯೊಂದು ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿದ್ದಾರೆ. ಈ ಕುರಿತು ಮಹಿಳೆಯು ತನಗಾಗುತ್ತಿರುವ ಅನ್ಯಾಯದ ಕುರಿತು ಪುತ್ತೂರಿನ ದಲಿತ್ ಸೇವಾ ಸಮಿತಿ ಮುಖಂಡರೊಬ್ಬರಿಗೆ ಮೊಬೈಲ್ ವಾಯ್ಸ್ ಮೆಸೇಜ್ ಸಂದೇಶ ನೀಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಮೂಲತಃ ತಮಿಳಿಯನ್ ಆಗಿದ್ದು, ಉರ್ಲಾಂಡಿಯಲ್ಲಿ ವಾಸ್ತವ್ಯ ಹೊಂದಿರುವ ನಾಗಮ್ಮ ಎಂಬವರು 10 ತಿಂಗಳ ಹಿಂದೆ ಉದ್ಯೋಗಕ್ಕೆಂದು ಏಜೆನ್ಸಿಯ ಮೂಲಕ ಕುವೈಟ್‌ಗೆ ತೆರಳಿದ್ದರು.‌ ಅಲ್ಲಿ ಅವರಿಗೆ ಆರೋಗ್ಯದ ಸಮಸ್ಯೆ ಆದಾಗ ಅಲ್ಲಿನ ಸಂಸ್ಥೆಯುವರು ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.

ಈ ಕುರಿತು ಪುತ್ತೂರಿನ ದಲಿತ್ ಸೇವಾ ಸಮಿತಿ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಅವರಿಗೆ ಮೊಬೈಲ್ ವಾಯ್ಸ್ ಮೆಸೇಜ್ ಮಾಡಿದ್ದಾರೆ. ’ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ನನಗೆ ಸರಿಯಾದ ಔಷಧ ನೀಡುತ್ತಿಲ್ಲ ಮತ್ತು ಅನಾರೋಗ್ಯ ಇದ್ದರೆ ವಿದೇಶಕ್ಕೆ ಯಾಕೆ ಬಂದದ್ದು ಎಂದು ಬೆದರಿಸಿ ಕೋಣೆಯೊಳಗೆ ಕೂಡಿ ಹಾಕಿದ್ದಾರೆ. ದಿನಕ್ಕೆ ಒಂದು ಹೊತ್ತು ಮಾತ್ರ ಆಹಾರ ನೀಡುತ್ತಿದ್ದಾರೆ. ನನ್ನೊಂದಿಗೆ ಶ್ರೀಲಂಕದ ಮಹಿಳೆಯರು ಇದ್ದಾರೆ’ ಎಂದು ವಾಯ್ಸ್ ಮೇಸೇಜ್‌ನಲಿ ತಿಳಿಸಿದ್ದಾರೆ ಎಂದು ಅಣ್ಣಪ್ಪ ಕಾರೆಕ್ಕಾಡು ತಿಳಿಸಿದ್ದಾರೆ.

ಏಜೇನ್ಸಿ ಕರೆ ಸ್ವೀಕರಿಸುತ್ತಿಲ್ಲ:
ದಿ.ಪಾಂಡಿಯನ್ ಎಂಬವರ ಪತ್ನಿ ನಾಗಮ್ಮ ಅವರು ಪುತ್ತೂರು ಬೊಳುವಾರು ಉರ್ಲಾಂಡಿಯಲ್ಲಿ ಮನೆ ಮಾಡಿಕೊಂಡಿದ್ದು, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ವಿದೇಶಕ್ಕೆ ಕೆಲಸಕ್ಕೆ ಹೋಗಿದ್ದಾರೆ.

ಅವರ ಪುತ್ರಿಗೆ ವಿವಾಹವಾಗಿದೆ. ಪುತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಾಗಮ್ಮ ಅವರಿಗೆ ವಿದೇಶಕ್ಕೆ ತೆರಳಲು ವೀಸಾ ಮಾಡಿಕೊಟ್ಟ ಏಜೆನ್ಸಿಯವರು ಕರೆ ಸ್ವೀಕರಿಸುತ್ತಿಲ್ಲ. ಹಾಗಾಗಿ ಪೊಲೀಸರಿಗೆ ಈ ಕುರಿತು ದೂರು ನೀಡುವುದಾಗಿ ತಿಳಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!