ಉಡುಪಿ: ಉಡುಪಿಯ ಕುಂದಾಪುರ ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ, ದನ ಕಳವು, ಅಕ್ರಮ ಜಾನುವಾರು ಸಾಗಾಟ ಹಾಗೂ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪಿಯೋರ್ವನನ್ನು ಗಡಿ ಪಾರು ಮಾಡಲಾಗಿದೆ.
ಮಹಮ್ಮದ್ ಸುಭಾನ್ ಎಂಬ ಆರೋಪಿಯನ್ನು 6 ತಿಂಗಳ ಕಾಲ ಚಿತ್ರದುರ್ಗ ಚಳ್ಳಕೆರೆ ಉಪ ವಿಭಾಗಕ್ಕೆ ಗಡೀಪಾರು ಮಾಡಲಾಗಿದೆ. “ಇನ್ನು ಮಹಮ್ಮದ್ ಸುಭಾನ್ ವಿರುದ್ಧ ಉಡುಪಿಯ ಗಂಗೊಳ್ಳಿ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದ್ದು, ಜೈಲು ಶಿಕ್ಷೆ ಅನುಭವಿಸಿದ್ದಾನೆ. ಹಲವು ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಬಂದ ಬಳಿಕವೂ ಈತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಾಂತಿ ಸುವ್ಯವಸ್ಥೆಗೆ ಭಂಗ ತಂದಿದ್ದ. ಗಂಗೊಳ್ಳಿ ಪಿಎಸ್ಐ ನೀಡಿದ ವರದಿ ಆಧರಿಸಿ ಕುಂದಾಪುರ ಉಪ ವಿಭಾಗದ ದಂಡಾಧಿಕಾರಿ ಮಹಮ್ಮದ್ ಸುಭಾನ್ಗೆ ಗಡಿ ಪಾರು ಮಾಡಿದ್ದಾರೆ. ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯದೆ ಕುಂದಾಪುರ ಉಪ ವಿಭಾಗದಲ್ಲಿ ಆರೋಪಿಯು ಕಾಣಿಸಿಕೊಂಡರೆ ಬಂಧಿಸುವಂತೆ ಆದೇಶಿಸಲಾಗಿದೆ.