ಉಡುಪಿ: ಉಡುಪಿ ಕೃಷ್ಣಾಷ್ಟಮಿ ಸಂದರ್ಭದಲ್ಲಿ ಕಳೆದ ಏಳು ವರ್ಷಗಳಿಂದ ಹಾಲಿವುಡ್ ಚಲನಚಿತ್ರ ಮಾದರಿಯಲ್ಲಿ ವೇಷ ಹಾಕಿ ಪ್ರೇಕ್ಷಕರನ್ನು ರಂಜಿಸುತ್ತಾ ಸಂಗ್ರಹವಾದ ಹಣವನ್ನು ಬಡಮಕ್ಕಳ ಚಿಕಿತ್ಸೆಗೆ ವಿನಿಯೋಗಿಸುವ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿ ವೇಷ ಧರಿಸಿ 1 ಕೋಟಿಯ ಗುರಿ ತಲುಪಿದ್ದಾರೆ.
ಈ ಹಿಂದೆ ಒಟ್ಟು 90 ಲಕ್ಷ ರೂಪಾಯಿ ಸಂಗ್ರಹಿಸಿ 66 ಮಂದಿ ಮಕ್ಕಳ ಚಿಕಿತ್ಸೆಗೆ ನೀಡಿದ್ದರು. ಈ ವರ್ಷ ಎರಡು ದಿನ ಡೀಮನ್ ರಾಕ್ಷಸ ಮಾದರಿಯ ಭಯಾನಕ ವೇಷ ಹಾಕಿ ಮತ್ತೆ 14 ಲಕ್ಷ ರೂಪಾಯಿ ಸಂಗ್ರಹಿಸಿ, ಒಟ್ಟು 1 ಕೋಟಿ ದೇಣಿಗೆ ಸಂಗ್ರಹಿಸಿ ತನ್ನ ಗುರಿಯನ್ನು ಸಾಧಿಸಿದ್ದಾರೆ.
ಈ ಮೂಲಕ ಮತ್ತೆ 8 ಮಕ್ಕಳಿಗೆ ಈ ಹಣವನ್ನು ನಾಳೆ ಉಡುಪಿ ಜಿಲ್ಲಾಧಿಕಾರಿಗಳ ಮುಖಾಂತರ ವಿತರಿಸಲಾಗುವುದು ಎಂದು ರವಿ ಕಟಪಾಡಿ ಹೇಳಿದ್ದಾರೆ.
7 ವರ್ಷಗಳ ಸುಧೀರ್ಘ ಅವಧಿಯಲ್ಲಿ ರವಿ ಫ್ರೆಂಡ್ಸ್ ತಂಡದ ಸದಸ್ಯರ ಸತತ ಪರಿಶ್ರಮ ಹಾಗೂ ದಾನಿಗಳ ಬೆಂಬಲದಿಂದ 1 ಕೋಟಿ ರೂಪಾಯಿ ನೆರವು ನೀಡುವ ಮಹಾತ್ಕಾರ್ಯ ಮಾಡಲು ಸಾಧ್ಯವಾಗಿದೆ.
ಮಂಗಳವಾರ ಕಟಪಾಡಿ ಪೇಟೆ ಬೆಟ್ಟು ಶ್ರೀ ಬಬ್ಬು ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ಹಣವನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದ್ದು, ಕೇಮಾರು ಮಠದ ಈಶ ವಿಠಲ ದಾಸ ಸ್ವಾಮೀಜಿ, ಜಿಲ್ಲಾಧಿಕಾರಿ ಕೂರ್ಮರಾವ್ ಮೊದಲಾದವರು ಉಪಸ್ಥಿತರಿರಲಿದ್ದಾರೆ