ಮಂಗಳೂರುಫೆ 23: ಬಂಟ್ವಾಳ ತಾಲೂಕಿನ ಬೋರಿಮಾರ್ ನಿವಾಸಿ ಅನಿಲ್ ಜಾನ್ ಸಿಕ್ವೇರಾ ಅವರು 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕರ್ನಾಟಕದ ಯುವ ಜಡ್ಜ್ ಎಣಿಸಿಕೊಂಡಿದ್ದಾರೆ. 25ನೇ ವಯಸ್ಸಿನಲ್ಲಿ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನದಲ್ಲಿ ತೇರ್ಗಡೆಯಾಗಿರುವುದು ಗಮನಾರ್ಹ ಸಾಧನೆಯಾಗಿದೆ. ಅವರು ಕರ್ನಾಟಕ ರಾಜ್ಯದ ಅತ್ಯಂತ ಕಿರಿಯ ಸಿವಿಲ್ ನ್ಯಾಯಾಧೀಶರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎಂ ಎಲ್ಎಲ್ಬಿ ಪದವೀಧರರಾಗಿರುವ ಅನಿಲ್ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದರು. ಅವರು ಬೋರಿಮಾರ್ನ ಸೈಂಟ್ ಜೋಸೆಫ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಮಾಣಿ ಕರ್ನಾಟಕ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಪುತ್ತೂರಿನ ಸಂತ ಫಿಲೋಮಿನಾ ಪಿಯು ಕಾಲೇಜಿನಲ್ಲಿ ಅವರ ಪದವಿ ಪೂರ್ವ ಶಿಕ್ಷಣ ಪೂರ್ಣಗೊಂಡಿತು.
ಇವರು ಮಂಗಳೂರು ವಕೀಲರ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ. ವಕೀಲರಾದ ದೀಪಕ್ ಡಿಸೋಜಾ ಮತ್ತು ನವೀನ್ ಎಸ್ ಪಾಯಿಸ್ ಅವರೊಂದಿಗೆ ಸಿವಿಲ್ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದಾರೆ. ಅನಿಲ್ ಹೈಸ್ಕೂಲ್ ದಿನಗಳಲ್ಲೇ, ನಾಯಕತ್ವದ ಗುಣ ಹೊಂದಿದ್ದರು. ಶಾಲಾ ನಾಯಕನಾಗಿ ಕರ್ತವ್ಯ ನಿರ್ವಹಿಸಿದ್ದರು.
ಬಳಿಕ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ನಾಯಕತ್ವಕ್ಕೆ ಹೆಚ್ಚಿನ ಬೆಂಬಲ ಸಿಕ್ಕಿತು. ಕಾನೂನು ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲಿ ಗ್ರಂಥಾಲಯ ಸಲಹಾ ಸಮಿತಿಯ ಸಂಯೋಜಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. 2022ರಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ (ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂಮೆಂಟ್) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇದೀಗ 25ನೇ ವಯಸ್ಸಿನಲ್ಲಿ ಎರಡನೇ ಪ್ರಯತ್ನದಲ್ಲಿ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಅನಿಲ್ ಅವರು ಯಶಸ್ವಿಯಾಗಿದ್ದು, ತುಳುನಾಡಿಗೆ ಕೀರ್ತಿ ತಂಡಿದ್ದಾರೆ.