ಪುತ್ತೂರು: ಅನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಐವರು ಬಜರಂಗದಳದ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಗಡೀಪಾರು ಶಿಫಾರಸ್ಸಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದು, ನ.22ರಂದು ಪುತ್ತೂರು ಸಹಾಯಕ ಆಯುಕ್ತರ ಮುಂಭಾಗದಲ್ಲಿ ಹಾಜರಾಗುವಂತೆ ಸೂಚನೆ
ನೀಡಲಾಗಿದೆ.
ಬಜರಂಗದಳ ಕಾರ್ಯಕರ್ತರಾದ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ನಿವಾಸಿ, ಅಟೋ ರಿಕ್ಷಾ ಚಾಲಕ ದಿನೇಶ್, ಎಲೆಕ್ನಿಷಿಯನ್ ಕೆಲಸ ಮಾಡುತ್ತಿರುವ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ ಪ್ರಜ್ವಲ್, ಲತೇಶ್ ಗುಂಡ್ಯ, ತಿಂಗಳಾಡಿ ನಿವಾಸಿ ನಿಶಾಂತ್ ಮತ್ತು ಅಜಲಡ್ಕ ನಿವಾಸಿ ಪ್ರದೀಪ್ ಆರೋಪಿಗಳು.
ಈ ಪೈಕಿ ಲತೇಶ್ ಗುಂಡ್ಯ ಬಜರಂಗದಳದ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಆಗಿದ್ದು, ಆರೋಪಿಗಳ ವಿರುದ್ಧ ಕೋಮು ಗಲಭೆ, ದನ ಸಾಗಾಟ ಹಲ್ಲೆ, ಅನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿದೆ. ಪುತ್ತೂರು ನಗರ ಠಾಣೆ ಹಾಗೂ ಸುಳ್ಯ ಠಾಣೆಯಿಂದ ಗಡೀಪಾರಿಗೆ ಮನವಿ ಮಾಡಲಾಗಿದ್ದು, ಲತೇಶ್ಗೆ ಬಳ್ಳಾರಿ ಜಿಲ್ಲೆಗೆ, ಪ್ರಜ್ವಲ್ ಗೆ ಬಾಗಲಕೋಟೆ ಜಿಲ್ಲೆಗೆ ಗಡೀಪಾರು ಮಾಡಲು ಮನವಿ ಮಾಡಲಾಗಿದೆ.
ಕರ್ನಾಟಕ ಪೊಲೀಸ್ ಅಧಿನಿಯಮ 1953ರ ಕಲಂ 55ರಡಿ ಗಡೀಪಾರು ನೋಟೀಸ್ ನೀಡಲಾಗಿದ್ದು, ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು ಎಂದು ಆರೋಪಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗಿದೆ.