ಮಂಗಳೂರು, ಅ.24: ಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಸಾಮರಸ್ಯದ ಅಗತ್ಯತೆಯನ್ನು ಪ್ರತಿಪಾದಿಸಿದವರಾಗಿದ್ದಾರೆ. ಅವರ ಪ್ರತಿಪಾದನೆಯಂತೆ ಸಾಮರಸ್ಯದ ಅಗತ್ಯತೆ ಇದೆ. ಕುದ್ರೋಳಿ ಕ್ಷೇತ್ರ ಸೌಹಾರ್ದತೆಯ ತಾಣವಾಗಿದೆ. ಮಂಗಳೂರು ದಸರಾ ಎಲ್ಲಾ ಧರ್ಮದ ಜನರ ಹಬ್ಬ. ಮೈಸೂರು ದಸರಾ ಬಳಿಕ ಎರಡನೇ ಸ್ಥಾನದಲ್ಲಿರುವ ಕುದ್ರೋಳಿ ಹಬ್ಬವಾದ ಮಂಗಳೂರು ದಸರಾ ವಿಶ್ವ ಪ್ರಸಿದ್ಧಿಯಾಗಿದೆ ಎಂದು ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ವಂ| ರೇ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು.
ದಸರಾ ಮಹೋತ್ಸವ ಹಿನ್ನೆಯಲ್ಲಿ ಸೋಮವಾರ ಕುದ್ರೋಳಿ ಕ್ಷೇತ್ರಕ್ಕೆ ಸೌಹಾರ್ದ ಭೇಟಿ ನೀಡಿ ಮಾತನಾಡಿದರು. ಕ್ಷೇತ್ರದ ವತಿಯಿಂದ ಬಿಷಪ್ ಅವರನ್ನು ಸ್ವಾಗತಿಸಿ ಗೌರವಿಸಲಾಯಿತು.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಂಗಳೂರು ಧರ್ಮಪ್ರಾಂತ್ಯದ ಪಿಆರ್ಒ ರಾಯ್ ಕ್ಯಾಸ್ತಲಿನೋ, ವಂ| ರೂಪೇಶ್ ಮಾಡ್ತಾ, ಕ್ಯಾಥೋಲಿಕ್ ಸಭಾ ಅಧ್ಯಕ್ಷ ಅಲ್ವಿನ್ ಡಿಸೋಜ, ಮಿಥುನ್ ಸಿಕ್ವೇರಾ, ಸುನಿಲ್ ಕುಮಾರ್ ಬಜಾಲ್, ಸ್ಟಾನ್ಲಿ ಡಿ’ ಕುನ್ಹಾ ಬಂಟ್ವಾಳ್ ಉಪಸ್ಥಿತರಿದ್ದರು.