ಯೋಗ ವಿಶ್ವವ್ಯಾಪಿಯಾಗಿರುವುದು ನಮ್ಮ ಸುಯೋಗ – ಎಂದು ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವೈದ್ಯಕೀಯ ಪದವಿ ವಿದ್ಯಾರ್ಥಿನಿ ಕುಮಾರಿ ಪ್ರತೀಕ್ಷಾ ಹೆಚ್ ಇವರು ಹೇಳಿದರು.
ಅವರು ದಿನಾಂಕ 18.09.2023ರಂದು ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ನಡೆದ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಆಯುಷ್ ಶಾಖೆಯಾದ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿಧಾನದ ಮೂಲಕ ವಿವಿಧ ರೋಗಗಳಿಗೆ ಔಷಧ ಹಾಗೂ ಶಸ್ತ್ರಚಿಕಿತ್ಸೆ ರಹಿತ ಪರಿಹಾರವನ್ನು ಕಂಡುಕೊಳ್ಳಬಹುದಾದ ಅನೇಕ ಅಂಶಗಳ ಬಗ್ಗೆ ಅವರು ಬೆಳಕು ಚೆಲ್ಲಿದರು. ಪ್ರಾಣಾಯಾಮ ಹಾಗೂ ಧ್ಯಾನದ ಪರಿಣಾಮಕಾರಿ ಅಭ್ಯಾಸದಿಂದ ನಮ್ಮ ದೇಹ ಹಾಗೂ ಮನಸ್ಸು ಸ್ವಸ್ಥವಾಗಿರಲು ಸಾಧ್ಯ ಎಂದು ಪ್ರಾಯೋಗಿಕ ಅಭ್ಯಾಸಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಸ್ಥಳೀಯರಾದ ರಾಮಚಂದ್ರ ಭಟ್ ಬಟ್ಯಡ್ಕ , ವಿದ್ಯಾ ಹೆಚ್ ಹಾಗೂ ಶಾಲೆಯ ಸ್ಥಳದಾನಿಗಳಾದ ಮಹಾಬಲ ಭಟ್ ನಡುಮನೆ, ಎಸ್ ಡಿ ಎಂಸಿ ಸದಸ್ಯರಾದ ವಿಷ್ಣು ಕನ್ನಡಗುಳಿ ಭಾಗವಹಿಸಿದ್ದರು.ಮುಖ್ಯಶಿಕ್ಷಕಿ ಶ್ರೀಮತಿ ಲತಾ ಯು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಶಾಲಾ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.