ಮಂಗಳೂರು, ಬಪ್ಪನಾಡು ದೇವಸ್ಥಾನದಲ್ಲಿ ಮಲ್ಲಿಗೆ ಸಮರ್ಪಣೆ ಶ್ರೇಷ್ಠವಾದ ಪದ್ಧತಿ ಇದೆ. ಹಿಂದೆ ನಾನು ಆರ್ಎಸ್ಎಸ್ ಪ್ರಚಾರಕನಾಗಿದ್ದಾಗ ಬಪ್ಪನಾಡು ದೇವಸ್ಥಾನದ ಬಳಿಯ ಮಲ್ಲಿಗೆ ವ್ಯಾಪಾರ ಅನ್ಯಮತೀಯರ ಕೈಯಲ್ಲಿತ್ತು. ದಿನದಲ್ಲಿ ಐದು – ಹತ್ತು ಸಾವಿರ ವ್ಯಾಪಾರ ನಡೆಯುತ್ತಿತ್ತು. ಜಾಗದ ಜವಾಬ್ದಾರಿ ನನ್ನ ಕೈಯಲ್ಲಿತ್ತು. ಆಗ ಅವರನ್ನು ಬದಲಾಯಿಸಿ ಮಲ್ಲಿಗೆ ವ್ಯಾಪಾರವನ್ನು ನಾವೇ ಮಾಡಿದರೆ ಹೇಗೆ? ಎಂಬ ಯೋಚನೆ ಮಾಡಿದೆವು. ಅದರಂತೆ ನಾನು ಮಲ್ಲಿಗೆ ವ್ಯಾಪಾರ ಶುರು ಮಾಡಿದ್ದೆ ಎಂದು ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇಲ್ಲಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಹಿಂದೂಗಳಲ್ಲಿರುವ ನಂಬಿಕೆಗಳು, ಶೃದ್ಧೆಗಳು ಭಾವನೆಗಳು ಬೇರೆಯವರಲ್ಲಿ ಇರಲು ಸಾಧ್ಯವಿಲ್ಲ. ದೇವಸ್ಥಾನದ ಬಳಿ ಹಿಂದೂ ಮಲ್ಲಿಗೆ ವ್ಯಾಪಾರಿ ಗೌರವದಿಂದ ವ್ಯಾಪಾರ ಮಾಡುತ್ತಾನೆ. ಲಾಭ ನಷ್ಟಕ್ಕಿಂತ ಭಗವಂತನ ಭಕ್ತಿಯ ಜೊತೆ ಮಲ್ಲಿಗೆ ಮಾರಾಟ ಮಾಡುತ್ತಾನೆ. ದೇವಸ್ಥಾನದ ಬಳಿ ಅಂಗಡಿ ಇಟ್ಟವ ವ್ಯಾಪಾರಿ ಹಿಂದೂವಾಗಿದ್ದರೆ ದೇವರಿಗೆ 10 ರೂ. ಕಾಣಿಕೆ ಇಟ್ಟೇ ವ್ಯಾಪಾರ ಶುರು ಮಾಡುತ್ತಾನೆ. ಅದು ಸಹಜ. ಇದರಲ್ಲಿ ಜಾತಿ, ಮತದ ಹೆಸರು ಅಲ್ಲ. ಹೀಗಾಗಿ ಎಲ್ಲವೂ ನಂಬಿಕೆಯ ಆಧಾರದ ಮೇಲೆ ನಡೆಯುತ್ತದೆ ಎಂದು ಹೇಳಿದರು. ಜಾತ್ರೆಗಳ ಸಂದರ್ಭಗಳಲ್ಲಿ ಹಿಂದೂಗಳೇ ವ್ಯಾಪಾರ ಮಾಡಬೇಕೆಂಬ ಬೇಡಿಕೆ ಇಟ್ಟಿರುವುದು ಸಮಂಜಸವಾಗಿದೆ. ಅದಕ್ಕೆ ನನ್ನ ಸಹಮತವಿದೆ. ನಿಮ್ಮ ಜೊತೆ ನಾನಿದ್ದೇನೆ ಎಂದರು. ಬಿಜೆಪಿ ಸರಕಾರ ಇದ್ದಾಗ ಹಿಂದೂ ಧಾರ್ಮಿಕ ಪರಿಷತ್ ಸ್ಥಾಪನೆಗೊಂಡಿತು. ಹಿಂದೂ ದೇವಸ್ಥಾನಗಳ ಪರಂಪರೆ, ಸಂಸ್ಕೃತಿ ಉಳಿಸುವುದಕ್ಕಾಗಿ ಇದು ಪ್ರಾರಂಭಗೊಂಡಿತು. ಹಿಂದೂ ಧಾರ್ಮಿಕ ಪರಿಷತ್ಗೆ ಆ ಜಿಲ್ಲೆಯ ಜಿಲ್ಲಾಧಿಕಾರಿ ಅಧ್ಯಕ್ಷನಾಗಬೇಕು ಮತ್ತು ಒಂದು ವೇಳೆ ಜಿಲ್ಲೆಯ ಜಿಲ್ಲಾಧಿಕಾರಿ ಅನ್ಯಮತೀಯ ಆಗಿದ್ದರೆ ಅವರು ಅದರ ಜವಾಬ್ದಾರಿ ತೆಗೆದುಕೊಳ್ಳುವಂತಿಲ್ಲ ಎಂಬ ನಿಯಮವಿದೆ. ಅದೇ ರೀತಿ ದೇವಸ್ಥಾನಗಳ ಬಳಿ ವ್ಯಾಪಾರವನ್ನು ಹಿಂದೂಗಳೇ ಮಾಡಬೇಕೆಂಬ ಉದ್ದೇಶದೊಂದಿಗೆ ಹಿಂದೂ ವ್ಯಾಪಾಸ್ಥರ ಸಂಘಟನೆ ಹುಟ್ಟಿಕೊಂಡಿರುವುದು ಒಳ್ಳೆಯ ವಿಷಯ ಎಂದರು.