ಮಂಗಳೂರು: ಗಮನ ಬೇರೆ ಕಡೆಗೆ ಸೆಳೆದು ಕಾರಿನಲ್ಲಿದ್ದ ಬ್ಯಾಗ್ ಕಳವು ಮಾಡಿದ ಘಟನೆ ನಗರದ ಪಿವಿಎಸ್ ವೃತ್ತದ ಬಳಿ ಸೋಮವಾರ ಸಂಭವಿಸಿದೆ.
ಮಹಿಳೆಯೋರ್ವರು ಬೆಳಗ್ಗೆ 10.30ಕ್ಕೆ ಪಿವಿಎಸ್ ಬಳಿಯ ಲಕ್ಷ್ಮೀನಾರಾಯಣ ದೇವಸ್ಥಾನದ ಗೇಟಿನ ಮುಂಭಾಗದಲ್ಲಿ ಕಾರು ನಿಲ್ಲಿಸಿ ಕಾರು ಸರ್ವೀಸ್ ಸೆಂಟರ್ಗೆ ಕರೆ ಮಾಡಿ ಮಾತನಾಡುತ್ತಿದ್ದರು. ಆಗ ಅಪರಿಚಿತ ವ್ಯಕ್ತಿಯೋರ್ವ ಬಂದು 10 ರೂ. ನೋಟನ್ನು ಅವರ ಕಾರಿನ ಎಡಭಾಗದಲ್ಲಿ ಹಾಕಿ “ನಿಮ್ಮ ಹಣ ಬಿದ್ದಿದೆ’ ಎಂದು ಹೇಳಿದ.
ಮಹಿಳೆ ಅದನ್ನು ಹೆಕ್ಕುತ್ತಿದ್ದಾಗ ಅಪರಿಚಿತ ವ್ಯಕ್ತಿಯು ಕಾರಿನ ಬಲಬದಿಯಲ್ಲಿಯೂ ನೋಟು ಇರುವುದಾಗಿ ತಿಳಿಸಿದ. ಮಹಿಳೆ ಅತ್ತ ಕಡೆ ನೋಡುತ್ತಿದ್ದಾಗ ಮತ್ತೋರ್ವ ಅಪರಿಚಿತ ಎಡಭಾಗದಿಂದ ಕಾರಿನ ಡ್ರೈವರ್ ಸೀಟಿನಲ್ಲಿದ್ದ 20,000 ರೂ. ನಗದು, ಕ್ರೆಡಿಟ್ ಕಾರ್ಡ್, ಬೀಗದ ಕೀ ಮತ್ತು ಇತರ ದಾಖಲೆಗಳಿದ್ದ ಬ್ಯಾಗ್ ಕಳವು ಮಾಡಿಕೊಂಡು ಹೋಗಿದ್ದಾನೆ. ಈ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.