ಉಡುಪಿ : ಟಿಕೆಟ್ ಸಿಕ್ಕಿಲ್ಲ ಎನ್ನುವುದಕ್ಕೆ ಬೇಸರವಿಲ್ಲ. ಆದರೆ ಪಕ್ಷ ನಡೆಸಿಕೊಂಡ ರೀತಿ ನೋವು ತಂದಿದೆ. ನಾನು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಪಕ್ಷೇತರ ಅಭ್ಯರ್ಥಿಯಾಗಿ‌ ನಿಲ್ಲುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.

ಶಾಸಕ ಕೆ. ರಘುಪತಿ ಭಟ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬುಧವಾರ ನೂರಾರು ಸಂಖ್ಯೆಯ ಕಾರ್ಯಕರ್ತರು ಸೇರಿದ್ದು, ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವ ಕಾರ್ಯಕರ್ತರನ್ನು ದಾರಿ ಮಧ್ಯೆ ಬಿಡಲ್ಲ. ರೆಡ್ಡಿ ಪಕ್ಷಕ್ಕೆ ಹೋಗುತ್ತೇನೆ ಎನ್ನುವುದು ಸೀಟ್ ಗಿಟ್ಟಿಸಿಕೊಳ್ಳುವವರು ಮಾಡುವ ಹುನ್ನಾರ ಎಂದರು.

ನನಗೆ ಟಿಕೆಟ್ ಸಿಗಲ್ಲ ಎನ್ನುವ ಬಗ್ಗೆ ಕನಸು ಮನಸ್ಸಿನಲ್ಲಿ ಊಹೆ ಮಾಡಿರಲಿಲ್ಲ. ಜಾತಿಯ ಕಾರಣಕ್ಕೆ ಬದಲಾವಣೆ ಮಾಡುತ್ತಾರೆ ಎನ್ನುವ ಆಲೋಚನೆ ಇರಲಿಲ್ಲ. ಪಕ್ಷದ ನಾಯಕತ್ವ, ಮೋದಿಯ ಬಗ್ಗೆ ಬೇಸರವಿಲ್ಲ. ನಾನು ಪಾರ್ಟಿಗೆ ಇಷ್ಟು ಬೇಡವಾದೆವೋ? ನನಗೆ ಟಿಕೆಟ್ ಇಲ್ಲ ಎನ್ನುವುದು ಮಾಧ್ಯಮದಲ್ಲಿ‌ ನೋಡಿ ತಿಳಿದುಕೊಳ್ಳಬೇಕೇ? ನನ್ನನ್ನು ಕೇಳಿ ಮಾಡುತ್ತಿದ್ದರೆ ನಾನೇ ರಾಜೀನಾಮೆ ಕೊಡುತ್ತಿದ್ದೆ ಎಂದರು.

ನಾನೊಬ್ಬ ಸಣ್ಣ ವ್ಯಕ್ತಿ. ನನಗೆ ಜಾತಿ ಇಲ್ಲ. 3 ಬಾರಿ ಶಾಸಕನಾದೆ. ನಾನೇ ಶಾಶ್ವತ ಅಭ್ಯರ್ಥಿ ಅಲ್ಲ ಎನ್ನುವುದು ನನಗೂ ಗೊತ್ತಿದೆ. ಸದ್ಯದ ಸ್ಥಿತಿಯಲ್ಲಿ ಸಾಮಾನ್ಯ ಕಾರ್ಯಕರ್ತ ನಿಂತರೂ ಪಕ್ಷ ಗೆಲ್ಲುವ ಸ್ಥಿತಿಯಲ್ಲಿದೆ. ಇದಕ್ಕೆ ನನ್ನ ಶ್ರಮ ಬಹಳಷ್ಟಿದೆ ಎಂದರು. ಯಾವೊಬ್ಬ ನಾಯಕರೂ ನನಗೆ ಕಾಲ್ ಮಾಡಿ ಮಾತನಾಡಿಲ್ಲ. ನನ್ನ ಅವಶ್ಯಕತೆ ಪಕ್ಷಕ್ಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!