ಮಂಗಳೂರು: ಕರಾವಳಿಯಲ್ಲಿ ಬ್ಲಾಕ್ ಮೇಲ್ (blackmailing) ಜಾಲ ಬೀಡುಬಿಟ್ಟಿದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರೇ ಇವರ ಟಾರ್ಗೆಟ್. ಇವರ ತಂಡದ ಸುಂದರ ಯುವತಿಯ ಅಂಗಾಂಗ ನೋಡಿ ಜೊಲ್ಲು ಸುರಿಸಿದ್ರೆ ನಿಮ್ಮ ಜೇಬಿಗೆ ಕತ್ತರಿ ಬಿತ್ತು ಅಂತಾನೆ ಅರ್ಥ. ಇದೇ ಗ್ಯಾಂಗ್ ನಿಂದಾಗಿ ಅಮಾಯಕ ಯುವಕನೊಬ್ಬನ ಪ್ರಾಣ ಹೋಗಿದೆ. ಹೌದು… ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ(dharmasthala) ಹರ್ಷಿತ್ ಬ್ಲಾಕ್ ಮೇಲ್ಗೆ ಹೆದರಿ ಆತ್ಮಹತ್ಯೆಗೆ (Suicide)ಶರಣಾಗಿದ್ದಾನೆ. ಬೆಳ್ತಂಗಡಿ ಗುರುದೇವ ಕಾಲೇಜ್‌ ನಲ್ಲಿ 2ನೇ ವರ್ಷದ ಬಿ.ಕಾಂ ಪದವಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದ ಹರ್ಷಿತ್ (19) ಯುವತಿಯ ಬೆತ್ತಲೆ ಜಗತ್ತಿಗೆ ಸಿಲುಕಿ ಬಳಿಕ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಸುಮಾರು 15 ದಿನಗಳ ಹಿಂದೆ ಓರ್ವ ಅಪರಿಚಿತ ಯುವತಿ ಸಂಪರ್ಕಕ್ಕೆ ಬಂದಿದ್ದಾಳೆ. ಇನ್ಸ್​ ಸ್ಟಾಗ್ರಾಂ ಮೂಲಕ ಚಾಟಿಂಗ್‌ ಮಾಡಿಕೊಂಡಿದ್ದು, ನಂತರ ಹರ್ಷಿತ್ ಮೊಬೈಲ್‌ ಗೆ ವಿಡಿಯೋ ಕಾಲ್‌ ಮಾಡಿದ್ದಾಳೆ. 3 ಸೆಕಂಡ್ ಗಳಲ್ಲಿ ವಿಡಿಯೋ ಕಾಲ್ ನ್ನು ಹರ್ಷಿತ ಕಟ್ ಮಾಡಿದ್ದಾನೆ. ನಂತರ ಯುವಕನೊಬ್ಬ ಕರೆ ಮಾಡಿ ನಿನ್ನ ವೈಯಕ್ತಿಕ ವಿಡಿಯೋ ನನ್ನ ಬಳಿ ಇದೆ. ಇದನ್ನು ಸಾರ್ವಜನಿಕವಾಗಿ ವೈರಲ್‌ ಮಾಡುತ್ತೇನೆ ಎಂದು ಹೆದರಿಸಿದ್ದಾನೆ. ಅಲ್ಲದೇ ವೈರಲ್‌ ಮಾಡಬಾರದು ಎಂದಾದರೆ 11,000 ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ.

ಹಣ ಕೊಡಲು ಜನವರಿ 23 ರವರೆಗೆ ಅವಕಾಶ ಕೊಡುವಂತೆ ಕೇಳಿದ್ದು, ಆದರೆ ಹಣ ಜಮಾಯಿಸಲು ಆಗಿಲ್ಲ. ಇತ್ತ ಆ ವಿಡಿಯೋ ವೈರಲ್‌ ಮಾಡಿದರೆ ಮಾನ ಹೋಗುತ್ತೆ ಎಂದು ಮರ್ಯಾದೆಗೆ ಅಂಜಿಕೊಂಡು ಮೊನ್ನೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಯುವಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತಿ. ಆದ್ರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಜನವರಿ 30) ಮೃತಪಟ್ಟಿದ್ದಾನೆ.

ಇನ್ನು ಇದೊಂದು ಜಾಲಕ್ಕೆ ಸಿಲುಕಿದ್ದು ಹರ್ಷಿತ್ ಮಾತ್ರವಲ್ಲ. ಆತನ ಮೂವರು ಸ್ನೇಹಿತರು ಕೂಡ ಇದೇ ರೀತಿ ಬ್ಲಾಕ್ ಮೇಲ್ ಗೆ ಒಳಗಾಗಿದ್ರು. ಅಪರಿಚಿತ ಹುಡುಗಿ ವಿಡಿಯೋ ಕಾಲ್ ಮಾಡುತ್ತಾಳೆ. ಆಗ ಆಕೆ ಬೆತ್ತಲಾಗಿರುತ್ತಾಳೆ. ಆಕೆಯ ಮುಖ ಕಾಣುತ್ತಿರೋದಿಲ್ಲ. ವಿಡಿಯೋ ಕಾಲ್ ರಿಸೀವ್ ಮಾಡಿ ಅಲ್ಲಿ ಏನು ಕಾಣುತ್ತಿದೆ ಎಂದು ನೋಡುವಷ್ಟರಲ್ಲೇ ಕಾಲ್ ಕಟ್ ಆಗುತ್ತೆ. ಅಪರಿಚಿತಳ ಮೊಬೈಲ್ ನಲ್ಲಿ ಇವರ ಮುಖ ಸೆರೆಯಾಗಿರುತ್ತೆ. ಅದರ ಸ್ಕ್ರೀನ್ ಶಾಟ್ ಮತ್ತು ರೆಕಾರ್ಡ್ ಮಾಡಿಕೊಂಡು ಅದನ್ನೇ ದಾಳವಾಗಿ ಮಾಡಿಕೊಳ್ಳುವುದು ಈ ತಂಡ ಮಾಡುತ್ತಿದೆ.

ಹೀಗೆ ಇವರಿಂದ ಮೋಸ ಹೋದವರು ಅದೆಷ್ಟೋ ಬಾರೀ ಸಾಕಷ್ಟು ಹಣವನ್ನು ಅವರ ಖಾತೆಗೆ ಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಜನರಿಗೆ ಇದೇ ರೀತಿ ಮೋಸವಾಗಿದೆ. ಕೆಲವರು ಹಣ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನು ಕೆಲವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಫೋನ್ ನಂಬರ್ ಮತ್ತು ಅಕೌಂಟ್ ಡಿಟೇಲ್ಸ್ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದ್ರೆ ಇವರು ಈ ಕಿರಾತಕ ಬುದ್ದಿಗೆ ಒಂದು ಅಮಾಯಕ ಪ್ರಾಣ ಬಿಟ್ಟಿದ್ದಂತು ನಿಜಕ್ಕೂ ದುರಂತ.

By admin

Leave a Reply

Your email address will not be published. Required fields are marked *

error: Content is protected !!