ಮಂಗಳೂರು: ಸುರತ್ಕಲ್‌ ಸಮೀಪದ ಕೃಷ್ಣಾಪುರದ ನೈತಂಗಡಿ ಎಂಬಲ್ಲಿ ಶನಿವಾರ ನಡೆದಿದ್ದ ಅಂಗಡಿ ಮಾಲೀಕ ಜಲೀಲ್‌ (43) ಕೊಲೆ ಆರೋಪದಲ್ಲಿ ಮೂವರು ಆರೋಪಿಗಳನ್ನು ಸುರತ್ಕಲ್‌ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃಷ್ಣಾಪುರ ನೈತಂಗಡಿಯ ಶೈಲೇಶ್‌ ಯಾನೆ ಶೈಲೇಶ್‌ ಪೂಜಾರಿ (26), ಹೆಜಮಾಡಿ ಎನ್‌.ಎಸ್‌.ರೋಡ್‌ನ ಸವಿನ್‌ ಕಾಂಚನ್‌ ಯಾನೆ ಮುನ್ನ (24) ಮತ್ತು ಕಾಟಿಪಳ್ಳ ಮೂರನೇ ಬ್ಲಾಕ್‌ನ ಪವನ್‌ ಯಾನೆ ಪಚ್ಚು (23) ಬಂಧಿತ ಆರೋಪಿಗಳು. ಪ್ರತ್ಯಕ್ಷದರ್ಶಿ ಸೇರಿದಂತೆ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು, ಅವರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಜಲೀಲ್‌ಗೆ ಮಹಿಳೆಯೊಬ್ಬರ ಜತೆ ಸುಮಾರು ಎಂಟು ವರ್ಷಗಳಿಂದ ಸಂಬಂಧವಿತ್ತೆಂದು ಹೇಳಲಾಗುತ್ತಿದ್ದು, ಇದನ್ನು ವಿರೋಧಿಸುತ್ತಾ, ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯೇ ಈ ಕೊಲೆ ಮಾಡಿಸಿದ್ದಾನೆ. ಆತ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ಶೈಲೇಶ್‌ ಸುರತ್ಕಲ್‌ ಠಾಣೆಯ ರೌಡಿಶೀಟರ್‌ ಆಗಿದ್ದು, ಆತನ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣಗಳಿವೆ. ಸವಿನ್‌ ಎಂಬಾತ ಮೂಲ್ಕಿ ಮತ್ತು ಸುರತ್ಕಲ್‌ ಠಾಣೆಯ ರೌಡಿ ಶೀಟರ್‌ ಆಗಿದ್ದು, ಈತನ ವಿರುದ್ಧ ಮೂಲ್ಕಿ, ಮೈಸೂರಿನ ನರಸಿಂಹರಾಜ, ಪಡುಬಿದ್ರಿ ಮತ್ತು ಸುರತ್ಕಲ್‌ ಠಾಣೆಯಲ್ಲಿ ಕೇಸುಗಳಿವೆ. ಪಡುಬಿದ್ರಿ ಠಾಣೆಯಲ್ಲಿ ಮಾದಕ ವ್ಯಸನ ಸೇವನೆ ಪ್ರಕರಣವೂ ದಾಖಲಾಗಿದೆ. ಪವನ್‌ ಮೇಲೆ ಯಾವುದೇ ಪ್ರಕರಣಗಳಿಲ್ಲ.

ಕೃಷ್ಣಾಪುರದಲ್ಲಿ ಹಿಂದು ಮಹಿಳೆಯೊಬ್ಬರು ಎಂಟು ವರ್ಷಗಳಿಂದ ವಾಸವಾಗಿದ್ದರು. ಆಕೆಯ ಗಂಡ ಆರಂಭದಲ್ಲಿ ವಿದೇಶದಲ್ಲಿದ್ದು, ನಂತರ ಆರು ವರ್ಷಗಳಿಂದ ಎಂಆರ್‌ಪಿಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಹಿಳೆಯು ಗಂಡನ ಹಣವನ್ನು ವಿವಿಧೆಡೆ ಹೂಡಿಕೆ ಮಾಡಿ, ಸಾಕಷ್ಟು ನಷ್ಟ ಅನುಭವಿಸಿದ್ದಳು. ಆರ್ಥಿಕ ಸಂಕಷ್ಟ ಎದುರಾದಾಗ ಜಲೀಲ್‌ ಅಂಗಡಿಯ ಪಕ್ಕದ ಮಹಿಳಾ ಟೈಲರ್‌ ಬಳಿ ಕೆಲಸಕ್ಕೆ ಸೇರಿದ್ದಳು. ಆ ಟೈಲರ್‌ ಮಹಿಳೆಯ ಚಿನ್ನದ ಸರವನ್ನೂ ಈಕೆ ಕೊಂಡು ಹೋಗಿ ಅದರಿಂದ ಸಾಲ ಪಡೆದು, ಮರಳಿಸದೆ ರಾದ್ಧಾಂತ ನಡೆದು, ರಾಜಿ ಪಂಚಾಯಿತಿಕೆ ಮಾಡಲಾಗಿತ್ತು. ಸುಮಾರು ಎಂಟು ವರ್ಷಗಳಿಂದ ಜಲೀಲ್‌ ಜತೆ ಸಂಬಂಧ ಹೊಂದಿದ್ದ ಆಕೆ, ಜಲೀಲ್‌ನಿಂದ ದ್ವಿಚಕ್ರ ವಾಹನ ಸೇರಿದಂತೆ ಸಾಕಷ್ಟು ನೆರವು ಪಡೆದುಕೊಂಡಿದ್ದಳು ಎನ್ನಲಾಗುತ್ತಿದೆ.

ಜಲೀಲ್‌ ಮತ್ತು ಆ ಮಹಿಳೆಯ ಸಂಬಂಧವನ್ನು ಈ ಪ್ರದೇಶದ ವ್ಯಕ್ತಿಯೊಬ್ಬ ತೀವ್ರವಾಗಿ ವಿರೋಧಿಸುತ್ತಿದ್ದ. ಎರಡು ವರ್ಷದ ಹಿಂದೆ ಆ ಮಹಿಳೆಯು ಜಲೀಲ್‌ನ ಅಂಗಡಿಯೊಳಗೆ ಇದ್ದಾಗ ಈ ವ್ಯಕ್ತಿಯು ಹಲವರನ್ನು ಕರೆದುಕೊಂಡು ಬಂದು ರೆಡ್‌ ಹ್ಯಾಂಡ್‌ ಆಗಿ ಹಿಡಿದು, ಗಲಾಟೆ ನಡೆಸಿ, ಎಚ್ಚರಿಕೆ ಕೊಟ್ಟು ಹೋಗಿದ್ದ. ಒಂದು ಮೂಲದ ಪ್ರಕಾರ, ಆತ ಕೂಡ ಮಹಿಳೆ ಜತೆ ಸಂಪರ್ಕ ಬೆಳೆಸಲು ಪ್ರಯತ್ನಿಸುತ್ತಿದ್ದ. ಆದರೆ, ಆಕೆ ನಿರಾಕರಿಸಿ ಜಲೀಲ್‌ ಜತೆ ಇರುತ್ತಿದ್ದಳು. ಬಂಧಿತ ಮೂವರು ಮತ್ತು ಆ ಪ್ರಮುಖ ಆರೋಪಿಯು ಶನಿವಾರ ಮಧ್ಯಾಹ್ನ ಪಕ್ಕದ ಶೇಂದಿ ಅಂಗಡಿ ಬಳಿಕ ಕುಳಿತು ಕೊಲೆಗೆ ಸ್ಕೆಚ್‌ ಹಾಕಿದ್ದರು. ಅದರಂತೆ ಸಂಜೆ ಜಲೀಲ್‌ ಅಂಗಡಿಗೆ ಬರುತ್ತಿದ್ದಾಗ, ಶೈಲೇಶ್‌ ಬೈಕ್‌ನಲ್ಲಿ ಅಡ್ಡಗಟ್ಟಿದ್ದ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ನಿನ್ನನ್ನು ಕೊಲ್ಲದೆ ಬೀಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿದ್ದ. ಬಳಿಕ ಸವಿನ್‌ನನ್ನು ಮನೆಯಿಂದ ಕರೆದುಕೊಂಡು ಬಂದು, ಸುಮಾರು ಏಳು ಗಂಟೆ ವೇಳೆಗೆ ಜಲೀಲ್‌ನನ್ನು ಅಂಗಡಿಯಲ್ಲೇ ಚೂರಿನಲ್ಲಿ ಇರಿದು ಇಬ್ಬರೂ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಜಲೀಲ್‌ನನ್ನು ಪಕ್ಕದ ಅಂಗಡಿ ಮಹಿಳೆ ರಕ್ಷಿಸುವ ಪ್ರಯತ್ನ ಮಾಡಿದ್ದರು. ನಂತರ ಆಸ್ಪತ್ರೆಗೆ ಕೊಂಡು ಹೋದರೂ, ಆತ ಕೊನೆಯುಸಿರೆಳೆದಿದ್ದರು.

ಹತ್ಯೆ ನಡೆಸಿ ಓಡಿ ಹೋದ ಆರೋಪಿಗಳನ್ನು ಪವನ್‌ ಬೈಕ್‌ನಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ, ಬಟ್ಟೆ ಬದಲಾಯಿಸಿ, ಆಟೋ ರಿಕ್ಷಾ ಮೂಲಕ ಸುರತ್ಕಲ್‌ ಪೇಟೆಗೆ ಬಂದು, ಅಲ್ಲಿಂದ ಕಾಪುವಿಗೆ ತೆರಳಿ, ಲಾಡ್ಜ್‌ನಲ್ಲಿ ತಂಗಿದ್ದರು. ಅಲ್ಲಿಂದ ಕೆಲವರನ್ನು ಸಂಪರ್ಕಿಸಿ ಹಣದ ವ್ಯವಸ್ಥೆ ಮಾಡಿಕೊಂಡು ಮಂಬಯಿಗೆ ಪರಾರಿಯಾಗುವ ಸಿದ್ಧತೆಯಲ್ಲಿದ್ದರು. ಈ ಮಧ್ಯೆ ಭಾನುವಾರ ರಾತ್ರಿ ಮೂವರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಮುಖ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.

ಜಲೀಲ್‌ ಹತ್ಯೆಯ ಮೂವರು ಆರೋಪಿಗಳನ್ನು ಬಂಧಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆ 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ತಿಳಿಸಿದ್ದಾರೆ. ಜಲೀಲ್‌ ಕೊಲೆ ಪ್ರಕರಣದಲ್ಲಿ ಬಂಧಿತ ಶೈಲೇಶ್‌ ಮತ್ತು ಸವಿನ್‌ ಕಾಂಚನ್‌ ಇಬ್ಬರೂ ಪಿಂಕಿ ನವಾಜ್‌ ಕೊಲೆ ಯತ್ನ ಪ್ರಕರಣದ ಆರೋಪಿಗಳು. 2021ರ ಫೆ.10ರಂದು ರೌಡಿಶೀಟರ್‌ ಪಿಂಕಿ ನವಾಜ್‌ ಹತ್ಯೆ ಯತ್ನ ನಡೆದಿತ್ತು. 2018ರಲ್ಲಿ ಸುರತ್ಕಲ್‌ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್‌ ಹತ್ಯೆಯ ಪ್ರಮುಖ ಆರೋಪಿ ಪಿಂಕಿ ನವಾಜ್‌ ಆಗಿದ್ದ. ಕೆಲವು ವರ್ಷಗಳ ಹಿಂದೆ ಕಾಟಿಪಳ್ಳದಲ್ಲಿ ನಡೆದಿದ್ದ ರವೂಫ್‌ ಹತ್ಯೆ ಆರೋಪಿ ಕೇಶವನ ಪುತ್ರ ಶೈಲೇಶ್‌ ಪೂಜಾರಿ ಎಂದು ಮೂಲಗಳು ತಿಳಿಸಿವೆ.

By admin

Leave a Reply

Your email address will not be published. Required fields are marked *

error: Content is protected !!