ಆಲಂಕಾರು: ಹಿಂದೂ ಯುವತಿಯೋರ್ವಳು ಅನ್ಯಕೋಮಿನ ಯುವಕನ ಜತೆಗಿದ್ದ ಘಟನೆ ಕೊಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ರವಿವಾರ ಸಂಜೆ ನಡೆದಿದೆ. ಮಂಜೇಶ್ವರ ಮೂಲದ ಹಿಂದೂ ಯುವತಿ, ಮುಡಿಪು ಮೂಲದ ಅನ್ಯಕೋಮಿನ ಯುವಕನ ಸಂಪರ್ಕದಲ್ಲಿದ್ದು, ಪ್ರಸ್ತುತ ಆತ ಕೆಲಸದ ನಿಮಿತ್ತ ಕೊಂತೂರು ಪೆರಾಬೆ ಕ್ರಾಮದ ಕೋಚಕಟ್ಟೆಯಲ್ಲಿ ಬಾಡಿಗೆ ರೂಮಿನಲ್ಲಿದ್ದ. ಹಿಂದೂ ಯುವತಿಯನ್ನು ಅಲ್ಲಿಗೆ ಬರಮಾಡಿಕೊಂಡಿದ್ದ ಎನ್ನಲಾಗಿದೆ.
ಹಿಂದೂ ಯುವತಿಯು ಅನ್ಯಕೋಮಿನ ಯುವಕನ ರೂಮಿನಲ್ಲಿರುವ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದರು. ಅವರು ಬರುತ್ತಿದ್ದಂತೆ ಯುವಕನು ಯುವತಿಯನ್ನು ಹಿಂಬಾಗಿನ ಮೂಲಕ ಹೊರಗೆ ಕಳುಹಿಸಿ ಆತ ಪರಾರಿಯಾಗಿದ್ದಾನೆ. ಜಾಗರಣ ವೇದಿಕೆಯ ಕಾರ್ಯಕರ್ತರು ಯುವತಿಯ ಬಗ್ಗೆ ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ಇಬ್ಬರು ಯುವಕರಿದ್ದರು!
ಸ್ಥಳೀಯರ ಮಾಹಿತಿ ಪ್ರಕಾರ ರೂಮಿನಲ್ಲಿ ಇಬ್ಬರು ಅನ್ಯಕೋಮಿನ ಯುವಕರಿದ್ದರು ಎನ್ನಲಾಗಿದ್ದು, ಯುವತಿಯನ್ನು ಕರೆತಂದ ಯುವಕನ ಹೆಸರು ಸವಾದ್ ಎಂದು ತಿಳಿಸಿದ್ದಾರೆ. ಅವರ ಮೂಲದ ಪ್ರಕಾರ ರೂಮಿನಲ್ಲಿದ್ದ ಇಬ್ಬರೂ ಯುವಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.