ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಹಂತಕರಿಗೆ ನೆರವು ನೀಡಿದ ಆರೋಪದಲ್ಲಿ ಎನ್‌ಐಎ ಲುಕೌಟ್‌ ನೋಟಿಸ್‌ ಹೊರಡಿಸಿದ ನಾಲ್ವರು ಆರೋಪಿಗಳು ಇನ್ನೂ ಪತ್ತೆಯಾಗದಿದ್ದು, ಪೊಲೀಸರ ತಂಡ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಬೆಳ್ಳಾರೆ ನಿವಾಸಿಗಳಾದ ಮಹಮ್ಮದ್‌ ಮುಸ್ತಫಾ, ಸಿದ್ಧಿಕ್‌ ಯಾನೆ ಪೈಂಟರ್‌ ಸಿದ್ಧಿಕ್‌, ಸುಳ್ಯದ ಉಮ್ಮರ್‌ ಫಾರೂಕ್‌, ಮಡಿಕೇರಿಯ ತುಫೈಲ್‌ ಎಂ.ಎಚ್‌. ತಲೆಮರೆಸಿಕೊಂಡಿರುವ ಆರೋಪಿಗಳು.

ಈ ನಾಲ್ವರು ಆರೋಪಿಗಳ ಪೈಕಿ ಮಡಿಕೇರಿಯ ಗದ್ದಿಗೆ ಮಸೀದಿ ಹಿಂಭಾಗದ ನಿವಾಸಿ ತುಫೈಲ್‌ ಎಂ.ಎಚ್‌. ವಿದೇಶಕ್ಕೆ ಪರಾರಿ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಎನ್‌ಐಎ ಮಾಹಿತಿ ಕಲೆ ಹಾಕಿದೆ. ಉಳಿದ ಮೂವರು ಆರೋಪಿಗಳು ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆಯ ಬಗ್ಗೆ ಪಾಸ್‌ಪೋರ್ಟ್‌ ತಯಾರಿ ಸೈಬರ್‌ ಸೆಂಟರ್‌ಗಳಲ್ಲಿ ತನಿಖೆ ನಡೆಸಿದ್ದು ಈ ಬಗ್ಗೆ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.

ಇನ್ನು ಮಂಗಳೂರಿನ ಆಟೋದಲ್ಲಿ ಕುಕ್ಕರ್‌ ಬಾಂಬ್ ಪ್ರಕರಣದ ಆರೋಪಿ ತೀರ್ಥಹಳ್ಳಿಯ ಶಾರೀಕ್‌ ಮಡಿಕೇರಿ ಮೂಲಕ ಸುಳ್ಯ, ಪುತ್ತೂರಿಗೆ ಬಂದು ಅನಂತರ ಮಂಗಳೂರಿಗೆ ತೆರಳಿರುವ ಹಿನ್ನೆಲೆಯಲ್ಲಿ ಈ ಆರೋಪಿಗೆ ಪ್ರವೀಣ್‌ ಹತ್ಯೆ ಪ್ರಕರಣದ ಆರೋಪಿಗಳ ಸಂಪರ್ಕ ಮೊದಲೇ ಇದ್ದಿತ್ತೇ ಎನ್ನುವ ಬಗ್ಗೆಯು ತನಿಖೆ ನಡೆಯುತ್ತಿದೆ. ಘಟನೆಯ ಮಾಸ್ಟರ್‌ ಮೈಂಡ್‌ ಮತೀನ್‌ ತಾಹಾ ವಿದೇಶದಲ್ಲಿದ್ದುಕೊಂಡು ಉಗ್ರ ಕೃತ್ಯಗಳಿಗೆ ಯುವಕರನ್ನು ಸೆಳೆಯುತ್ತಿದ್ದು ಆತನೊಂದಿಗೆ ಪ್ರವೀಣ್ ಪ್ರಕರಣದ ಆರೋಪಿಗಳು ಸಂಪರ್ಕ ಹೊಂದಿರುವ ಬಗ್ಗೆಯೂ ಎನ್‌ಐಎ ತನಿಖೆ ನಡೆಸಲಿದೆ.

ಆರೋಪಿಗಳಾಗಿರುವ ಮೊಹಮ್ಮದ್‌ ಮುಸ್ತಫಾ ಎಸ್‌., ತುಫೈಲ್‌ ಎಂ.ಎಚ್‌. ಪತ್ತೆಗೆ ತಲಾ 5 ಲಕ್ಷ ರೂ. ಹಾಗೂ ಉಮ್ಮರ್‌ ಫಾರೂಕ್‌, ಅಬೂಬಕ್ಕರ್‌ ಸಿದ್ಧೀಕ್‌ ಪತ್ತೆಗೆ ತಲಾ 2 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ.

By admin

Leave a Reply

Your email address will not be published. Required fields are marked *

error: Content is protected !!