ಮಂಗಳೂರು: ಮಂಗಳೂರು ಆಟೋ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಪುಷ್ಠಿ ನೀಡುವಂತೆ ಇದೀಗ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೊಣೆಗಾರಿಕೆಯನ್ನು ಹೊತ್ತಿದ್ದು ಈ ಹಿನ್ನೆಲೆ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ಕರಾವಳಿಯಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ. ಹಿಂದೂ ದೇವಾಲಯವನ್ನೇ ಟಾರ್ಗೆಟ್ ಮಾಡಿರುವಂತೆ ಕಂಡುಬಂದಿರುವ ಈ ಪೋಸ್ಟ್ನಲ್ಲಿ ‘ಕೇಸರಿ ಉಗ್ರರನ್ನು ಗುರಿಯಾಗಿಸಿಕೊಂಡು ನಮ್ಮ ಸಹೋದರ ಮೊಹ್ಮದ್ ಶಾರೀಕ್ ಕದ್ರಿಯಲ್ಲಿರುವ ಮಂಜುನಾಥ ದೇಗುಲದ ಮೇಲೆ ಅಟ್ಯಾಕ್ ಮಾಡಲು ಪ್ರಯತ್ನಿಸಿದ್ದ. ಆದರೆ ಆ ಉದ್ದೇಶ ಸಫಲವಾಗಿಲ್ಲ ಎಂದು ಆ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.
ನಾವು ವ್ಯಾಪಾರ ಮತ್ತು ತಂತ್ರಗಾರಿಕೆಯ ದೃಷ್ಠಿಕೋನದಲ್ಲಿ ಗೆದ್ದಿದ್ದೇವೆ. ಸಹೋದರನ ಬಂಧನವನ್ನು ಸಂಭ್ರಮಿಸುತ್ತಿರುವವರಿಗೆ ಅದರಲ್ಲೂ ವಿಶೇಷವಾಗಿ ಎಡಿಜಿಪಿ ಅಲೋಕ್ ಕುಮಾರ್ ಅವರಂತವರು, ನಿಮ್ಮ ಸಂತೋಷ ಇನ್ನು ಮುಂದೆ ಅಲ್ಪಕಾಲಿಕವಾಗಿರುತ್ತದೆ. ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಶೀಘ್ರದಲ್ಲಿ ಅನುಭವಿಸುತ್ತೀರಿ. ನಮ್ಮ ಟಾರ್ಗೆಟ್ ಲೀಸ್ಟ್ನಲ್ಲಿ ನೀವೂ ಇದ್ದೀರಿ’ ನಾವು ನಿಮ್ಮ ಬಳಿಗೆ ಬರುತ್ತೇವೆ, ಯಾಕೆ ದಾಳಿ ಮಾಡಿದ್ರಿ ಅಂತ ಪ್ರಶ್ನೆ ಮಾಡೋರಿಗೆ ಉತ್ತರ ನೀಡುತ್ತೇವೆ. ನಮ್ಮ ಮೇಲೆ ವಿನಾಕಾರಣ ಮುಕ್ತ ಸಮರ ಘೋಷಣೆ ಮಾಡ್ತಿದ್ದೀರಲ್ವಾ ನಾವು ಪ್ರತೀಕಾರ ತೀರಿಸಿಕೊಳ್ತಿದ್ದೇವೆ. ನಮ್ಮ ಕಡೆಯ ಅಮಾಯಕರು ಜೈಲುಗಳಲ್ಲಿ ನರಕ ಅನುಭವಿಸುತ್ತಿರುವ ಕಾರಣ ನಾವು ಪ್ರತೀಕಾರ ತೀರಿಸಕೊಳ್ತಿದ್ದೇವೆ.
ಸಾರ್ವಜನಿಕ ಸ್ಥಳಗಳು ನಮ್ಮ ನರಮೇಧದ ಕರೆಗೆ ಸಾಕ್ಷಿಯಾಗುತ್ತದೆ’ ಎಂದು ಆ ಪೋಸ್ಟ್ನಲ್ಲಿ ಉಲ್ಲೇಖ ಮಾಡಲಾಗಿದ್ದು ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಒಟ್ಟಾರೆಯಾಗಿ ಈ ಒಂದು ಪೋಸ್ಟ್ ಭಯೋತ್ಪಾದನೆಯ ಜಾಲದ ಆಳವನ್ನು ಹೇಳುತ್ತಿದೆ. ಹಾಗೆಯೇ ನಮ್ಮ ದಾಳಿ ಕದ್ರಿ ದೇವಸ್ಥಾನ ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್ ಸ್ಫೋಟಗೊಂಡಿದೆ’ ಎಂದು ಹೊಣೆ ಹೊತ್ತ ಸಂಘಟನೆ ಹೇಳಿಕೊಳ್ಳುತ್ತಿರುವುದರಿಂದ ಇದು ಸಮಾಜದಲ್ಲಿ ಗಲಭೆಯನ್ನು ಸೃಷ್ಟಿಸಲು ಮಾಡಿರುವ ಕೃತ್ಯವಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ.
ಈ ಕುರಿತಂತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಮಾಜಿ ಮೊಕ್ತೇಸರ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ಪ್ರತಿಕ್ರಿಯೆ ನೀಡಿದ್ದು, ಕದ್ರಿ ದೇವಸ್ಥಾನ ಬಹಳ ಪುರಾಣ ಪ್ರಸಿದ್ಧ ಕ್ಷೇತ್ರ. ಈ ದೇವಸ್ಥಾನದಿಂದ ಇದುವರೆಗೆ ಯಾರಿಗೂ ವಿರೋಧವಾದ ಸಂದೇಶ ಹೋಗಿಲ್ಲ. ಮಂಜುನಾಥ ದೇವರ ದಯೆಯಿಂದ ದುರಂತವೊಂದು ತಪ್ಪಿದೆ. ಮಾತ್ರವಲ್ಲದೆ ಆತನಿಗೂ ಏನೂ ಆಗಿಲ್ಲ ಎನ್ನವುದು ನಮ್ಮ ನಂಬಿಕೆ. ಭಯೋತ್ಪಾದನೆ ನಮ್ಮ ದೇಶಕ್ಕೆ ಅಥವಾ ಯಾವುದೇ ಒಂದು ದೇಶಕ್ಕೆ ಸೀಮಿತವಾಗಿಲ್ಲ. ಭಯೋತ್ಪಾದನೆ ವ್ಯವಸ್ಥೆಯಲ್ಲಿ ಹೀಗೇ ಮುಂದುವರಿದರೆ ನಾವು ಸಾರ್ವಜನಿಕವಾಗಿ ಜಾತ್ರೆ, ಉತ್ಸವ, ಸಭೆ ಸಮಾರಂಭಗಳನ್ನು ನಡೆಸಲಾಗದ ಸ್ಥಿತಿ ಬರ ಬಹುದು. ನಾವು ಸದ್ಭುದ್ದಿಯಿಂದ ಮುಂದುವರಿಯ ಬೇಕು. ಜನರಲ್ಲಿ ಭಗವಂತನನ್ನು ಕಾಣ ಬೇಕು. ಅಂತಹ ಸದ್ಭುದ್ಧಿ ಅವರಿಗೆ ಬರ ಬೇಕೆಂಬುದೇ ಪ್ರಾರ್ಥನೆ ಎಂದು ತಿಳಿಸಿದ್ದಾರೆ.
ಈ ಪೋಸ್ಟ್ ಜೊತೆಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ನ ಎರಡು ಹಳೆಯ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. ಆದ್ರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಯಾವುದೇ ಸ್ಪಷ್ಟಿಕರಣ ನೀಡಿಲ್ಲ. ಕರಾವಳಿಯನ್ನೇ ಟಾರ್ಗೆಟ್ ಮಾಡಿರುವ ಈ ಪೋಸ್ಟ್ ಮತ್ತು ಇತ್ತೀಚೆಗೆ ನಡೆದ ಕುಕ್ಕರ್ ಬಾಂಬ್ ಸ್ಪೋಟ ಘಟನೆಗಳು ಈ ವರೆಗೆ ಕೇವಲ ಸ್ಲೀಪರ್ ಸೆಲ್ ಗಳಾಗಿ ಬಳಕೆಯಾಗುತ್ತಿದ್ದ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಗ್ರರು ಆ್ಯಕ್ಟಿವ್ ಆಗಿ ಈ ಭಾಗವನ್ನೇ ಟಾರ್ಗೆಟ್ ಮಾಡಿದ್ದು ಗಮನಿಸಿದರೆ ಸರ್ಕಾರ, ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆಗಳು ಹೆಚ್ಚು ಕಾರ್ಯಶೀಲವಾಗಬೇಕಾದ ಅಗತ್ಯವಿದೆ.
ಆ ಪೋಸ್ಟ್ ಪ್ರಕಾರ ಅಸಲಿಗೆ ಸ್ಫೋಟದ ಪ್ಲಾನ್ ಇದ್ದಿದ್ದು ಪಂಪ್ ವೆಲ್ನಲ್ಲಿ ಅಲ್ಲ. ಉಗ್ರ ಸಂಘಟನೆಯ ಟಾರ್ಗೆಟ್ ಇದ್ದಿದ್ದು, ಕದ್ರಿ ದೇವಸ್ಥಾನ ಎಂಬುದು ಸ್ಪಷ್ಟವಾಗಿದೆ. ಕದ್ರಿ ದೇವಸ್ಥಾನದ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಅಲ್ಲಿ ಸ್ಫೋಟಿಸುವುದು ಶಾ಼ರೀಕ್ ನ ಉದ್ದೇಶವಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.