ಮಂಗಳೂರು: ಕಾಟಿಪಳ್ಳ ಎರಡನೇ ಬ್ಲಾಕ್ನ ಶಂಶುದ್ದೀನ್ ಸರ್ಕಲ್ ಬಳಿಯ ನೂರ್ ಹುದಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪೋಷಕರ ಸಭೆಯ ವೇಳೆ ವ್ಯಕ್ತಿಯೋರ್ವ ಶಿಕ್ಷಕಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಗಾಯಗೊಂಡ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾರಾಯಣ ಗುರು ಶಾಲೆಯ ಬಳಿಯ ನಿವಾಸಿ ಚಂದ್ರಕಲಾ ಎಂಬಾಕೆ ಮಹಮ್ಮದ್ ಹನೀಫ್ ನಿಂದ ಹಲ್ಲೆಗೊಳಗಾದ ಶಿಕ್ಷಕಿ. ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಚಂದ್ರಕಲಾ ಅವರಿಗೆ ಆರೋಪಿ ಹನೀಫ್ ಪರಿಚಯವಿದ್ದು, ಪರಿಚಯದ ನೆಲೆಯಲ್ಲಿ ಹನೀಫ್ ಪತ್ನಿಗೆ ಚಂದ್ರಕಲಾ ಅವರು ಸಾಲ ನೀಡಿದ್ದರು. ಆ ಮಹಿಳೆ ಸಾಲವನ್ನು ಹಿಂತಿರುಗಿಸಿರಲಿಲ್ಲ. ಹಣದ ಅವಶ್ಯಕತೆ ಇದ್ದು, ಸಾಲವನ್ನು ಹಿಂತಿರುಗಿಸುವಂತೆ ಚಂದ್ರಕಲಾ ಕೇಳಿದ್ದರು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಹನೀಫ್ ಎರಡು ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ. ಶಾಲೆಯಲ್ಲಿ ಪೋಷಕರ ಸಭೆಯ ಸಂದರ್ಭದಲ್ಲಿ ಚಂದ್ರಕಲಾ ಮತ್ತು ಹನೀಫ್ ಪತ್ನಿಯ ಮಧ್ಯೆ ಜಗಳ ನಡೆದಿದೆ.

ಇನ್ನು ಮಾತಿನ ಭರದಲ್ಲಿ ಶಿಕ್ಷಕಿಯು ತನ್ನ ಮಗುವಿನ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಸಿಟ್ಟಾದ ಹನೀಫ್ ಏಕಾಏಕಿ ಹಲ್ಲೆ ನಡೆಸಿದ್ದು, ಶಿಕ್ಷಕಿಯ ಬಲಗೈಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ.

By admin

Leave a Reply

Your email address will not be published. Required fields are marked *

error: Content is protected !!