ಸುಳ್ಯ: ಜನರು ವಾಹನಗಳಲ್ಲಿ ಸಂಚರಿಸಲು ತೊಂದರೆಯಾಗುತ್ತಿರುವ ರಸ್ತೆಯ ಹೊಂಡಗಳನ್ನು ಮುಚ್ಚಲು ಇದೀಗ ಕಾಲೇಜೊಂದರ ನಿವೃತ್ತ ಪ್ರಾಂಶುಪಾಲರೇ ಮುಂದಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ ನಗರದ ಶ್ರೀರಾಂ ಪೇಟೆಯಲ್ಲಿ ಜ್ಯೂನಿಯರ್ ಕಾಲೇಜು ಕ್ರಾಸ್ ರಸ್ತೆಯಲ್ಲಿ ಮತ್ತು ರಥಬೀದಿಯಲ್ಲಿ ನಿರ್ಮಾಣವಾದ ಹೊಂಡಕ್ಕೆ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎನ್ ಎ ಜ್ಞಾನೇಶ್ ಅವರ ನೇತೃತ್ವದಲ್ಲಿ ಸಿಮೆಂಟ್ ಜಲ್ಲಿ ಹಾಕಿ ತೇಪೆ ಹಾಕಲಾಗಿದೆ.
ಇತ್ತೀಚೆಗೆ ಆರ್ಜೆ ತ್ರಿಶೂಲ್ ಅವರು ರಸ್ತೆ ಅವ್ಯವಸ್ಥೆ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ಹಿನ್ನೆಲೆ ವಿವಾದ ಪೊಲೀಸ್ ಠಾಣೆ ಮೆಟ್ಟಿಲು ಕೂಡಾ ಏರಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಸೃಷ್ಠಿಯಾಗಿ ಸಾವರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದರೂ ಕೂಡಾ ರಾಷ್ಟ್ರೀಯ ಹೆದ್ದಾರಿ ಇಲಾಖೆಯಾಗಲಿ, ನಗರ ಪಂಚಾಯಿತಿ ಆಗಲಿ ರಸ್ತೆಯ ಗುಂಡಿಗಳನ್ನು ಮುಚ್ಚಿಸುವ ಗೋಜಿಗೆ ಹೋಗಿರಲಿಲ್ಲ.
ಆದ ಕಾರಣ ನಿನ್ನೆ ಜ್ಞಾನೇಶ್ ಅವರು ತಮ್ಮ ಕೆಲಸದವರೊಂದಿಗೆ ವಿವಿಧ ಕಡೆಗಳಲ್ಲಿರುವ ಹೊಂಡಗಳನ್ನು ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಿ ಮುಚ್ಚಿಸಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.