ಸುಳ್ಯ : ಭಾರೀ ಮಳೆಯಿಂದಾಗಿ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು ನೀರು ರಸ್ತೆಗೆ ನುಗ್ಗಿದ ಪರಿಣಾಮ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಇದರಿಂದ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಸುಳ್ಯ ನಗರ ಸಮೀಪ ಅರಂಬೂರು, ಪಾಲಡ್ಕ ಭಾಗದಲ್ಲಿ ರಸ್ತೆಯ ಮೇಲೆ ನೀರು ತುಂಬಿದ್ದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಪಯಸ್ವಿನಿ ನದಿಯ ಬದಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಭಾರೀ ಪ್ರಮಾಣದಲ್ಲಿ ನೀರು ತುಂಬಿದೆ. ಪಯಸ್ವಿನಿ ನದಿ ತುಂಬಿ ಹರಿದ ಕಾರಣ ನಿನ್ನೆ ರಾತ್ರಿಯಿಂದ ಹಲವು ಕಡೆಗಳಲ್ಲಿ ರಾಷ್ಟ್ರೀಯ ಹದ್ದಾರಿಯ ಮೇಲೆ ನೀರು ನುಗ್ಗಿದ್ದರಿಂದ ಸಂಚಾರಕ್ಕೆ ತಡೆ ಉಂಟಾಗಿದೆ. ರಾತ್ರಿಯಿಂದ ರಸ್ತೆ ಬಂದ್ ಆಗಿದ್ದು 6-7 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ನೀರಿನ ಮಟ್ಟ ಇಳಿಯದ ಕಾರಣ ವಾಹನ ಸಂಚಾರ ಪುನರಾರಂಭಿಸಲು ಸಾಧ್ಯವಾಗಿಲ್ಲ.
ಈ ಪ್ರದೇಶಗಳ ಹಲವಾರು ಮನೆಗಳು ಜಲಾವೃತಗೊಂಡಿದ್ದು, ಮನೆಯವರ ಸ್ಥಳಾಂತರ ಮಾಡಲಾಗಿದೆ. ಸ್ಥಳದಲ್ಲಿ ಪೊಲೀಸರು ಬಂದೋಬಸ್ತ್ ಕಲ್ಪಿಸಲಾಗಿದೆ.