ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪದಗ್ರಹಣ ಮಾಡಲಿದ್ದಾರೆ ಎಂದು ಘೋಷಣೆಯಾಗಿದೆ.
ಈವರೆಗೀ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ (BJP) ದೇವೇಂದ್ರ ಫಡ್ನವಿಸ್ (Devendra fadnavis) ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಇದರಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಂಜೆ 7.30ಕ್ಕೆ ರಾಜಭವನದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಮಹಾ ಅಘಾಡಿ ಸರ್ಕಾರ ಪತನವಾಗಲು ಪ್ರಮುಖವಾಗಿ ಕಾರಣವಾಗಿದ್ದ ಬಂಡಾಯ ಬಣದ ಲೀಡರ್ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಪಟ್ಟ ನೀಡುವ ನಿಟ್ಟಿನ ನಿರ್ಧಾರವನ್ನು ಸ್ವತಃ ದೇವೇಂದ್ರ ಫಡ್ನವಿಸ್ ಅವರೇ ಮಾಡಿದ್ದಾರೆ.
2019ರಲ್ಲಿ ನಾವು ಹಾಗೂ ಶಿವಸೇನೆ ಒಟ್ಟಾಗಿ ಚುನಾವಣೆ ಎದುರಿಸಿದ್ದೆವು. ನಾವು ಪೂರ್ಣ ಪ್ರಮಾಣದಲ್ಲಿ ಬಹುಮತ ಪಡೆದುಕೊಂಡಿದ್ದೆವು. ಆದರೆ, ಚುನಾವಣೆಯ ಬಳಿಕ, ಶಿವಸೇನೆ ಬೇರೆಯದೇ ಆದ ನಿರ್ಧಾರ ಮಾಡಿತು. ಇದರಿಂದಾಗಿ ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಗಳಾದವು. ಈ ಮೈತ್ರಿಯನ್ನು ಮುರಿಯಬೇಕು ಎಂದು ಶಿವಸೇನೆ ಶಾಸಕರು ಒತ್ತಾಯಿಸಿದರೂ ಈಡೇರಿಲ್ಲ. ಆದರೆ ಉದ್ಧವ್ ಠಾಕ್ರೆ ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಇರಲು ನಿರ್ಧರಿಸಿದ್ದಾರೆ. ಮತ್ತು ಅವರು ತಮ್ಮ ಸ್ವಂತ ಶಾಸಕರ ಮಾತನ್ನು ಕೇಳಲಿಲ್ಲ ಎಂದು ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅವರನ್ನು ನೇಮಕ ಮಾಡಿದ್ದರ ಹಿಂದಿನ ಕಾರಣ ತಿಳಿಸಿದರು.