ಉಡುಪಿ: ಮೆಹಂದಿ ಕಾರ್ಯಕ್ರಮದಲ್ಲಿ ಕುಣಿಯುತ್ತಲೇ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಅಂಬಾಗಿಲು ಪುತ್ತೂರು ಬಳಿ ನಡೆದಿದೆ. ಹಾಡುತ್ತ ಎಂಜಾಯ್ ಮಾಡುತ್ತ ಕುಣಿಯುತ್ತಿದ್ದ ಗಣಪತಿ ಆಚಾರ್ಯ(56) ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದಿದ್ದಾರೆ. ತಕ್ಷಣವೇ ಗಣಪತಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಿದ್ದು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
ಚಿನ್ನದ ವ್ಯಾಪಾರಿಯಾಗಿದ್ದ ಗಣಪತಿ ಆಚಾರ್ಯ ನಿನ್ನೆ ಅಂದರೆ ಜೂನ್ 21ರ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರೊಂದಿಗೆ ಟೈಗರ್ ಡ್ಯಾನ್ಸ್ ಮಾಡುವಾಗ ಇದ್ದಕ್ಕಿದಂತೆ ಆಯಾಸವಾಗಿ ಕುರ್ಚಿಯ ಮೇಲೆ ಬಂದು ಕುಳಿತಿದ್ದಾರೆ. ಕುರ್ಚಿಯಲ್ಲಿ ಕುಳಿತ ಕೆಲವೇ ಕ್ಷಣದಲ್ಲಿ ಹೃದಯಾಘಾತವಾಗಿ ಕೆಲಕ್ಕೆ ಕುಸಿದಿದ್ದಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು ಮಾರ್ಗ ಮಧ್ಯೆಗೆ ಪ್ರಾಣಬಿಟ್ಟಿದ್ದಾರೆ. ಓರ್ವ ಮಗ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಡದಿಯನ್ನು ಗಣಪತಿ ಅಗಲಿದ್ದಾರೆ.