ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ಗರ್ಭಗೃಹದ ನಿರ್ಮಾಣದ ಭೂಮಿ ಪೂಜೆಯನ್ನು ಉತ್ತರಪ್ರದೇಶ ಯೋಗಿ ಆದಿತ್ಯನಾಥ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಅಯೋಧ್ಯೆಯ ರಾಮ ಮಂದಿರ ಭಾರತದ ರಾಷ್ಟ್ರೀಯ ದೇವಸ್ಥಾನವಾಗಲಿದೆ. ಜೊತೆಗೆ ದೇಶದ ಏಕತೆಯ ಗುರುತಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2 ವರ್ಷದ ಹಿಂದೆ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಗರ್ಭಗೃಹದ ನಿರ್ಮಾಣಕ್ಕೆ ಇದೀಗ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.
ಭಾರತದ ರಾಷ್ಟ್ರೀಯ ದೇವಸ್ಥಾನವಾಗಿ ರಾಮ ಮಂದಿರ ಹೊರಹೊಮ್ಮಲಿದೆ. ದೇಶದ ಜನ ಬಹಳ ದಿನಗಳಿಂದ ದೇಗುಲ ನಿರ್ಮಾಣವನ್ನು ಎದುರು ನೋಡುತ್ತಿದ್ದು, ರಾಮಮಂದಿರ ಭಾರತದ ಏಕತೆಯ ಸಂಕೇತವಾಗಲಿದೆ ಎಂದು ಯೋಗಿ ಆದಿತ್ಯನಾಥ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು. ರಾಮ ಮಂದಿರ ನಿರ್ಮಾಣ ಸಮಸ್ತ ದೇಶದ ಜನತೆಯೆ ಕನಸು. ಇದು ಕೇವಲ ಮಂದಿರವಾಗದೇ ದೇಶವನ್ನು ಒಂದು ಭಕ್ತಿಯ ಭಾವನೆಯಲ್ಲಿ ಬೆಸೆಯುವ ದೇಗುಲವಾಗಿ ಹೊರಹೊಮ್ಮಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ರಾಮ ಭಕ್ತರನ್ನು ಈ ದೇಗುಲ ಒಂದು ಮಾಡಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ದಶಕಗಳ ಹೋರಾಟದ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯದ ಸೌಭಾಗ್ಯ ದೊರೆತಿದೆ. ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರ ಈ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದೆ. ಭವ್ಯ ರಾಮ ಮಂದಿರ ನಿರ್ಮಾಣ ದೇಶವನ್ನು ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಜೋಡಿಸಲಿದೆ ಎಂದು ಯೋಗಿ ಆದಿತ್ಯನಾಥ್ ಭರವಸೆ ವ್ಯಕ್ತಪಡಿಸಿದ್ದಾರೆ.