ಬಾಗಲಕೋಟೆ, ಮೇ 26: ಆಕೆಯ ಸಾಧನೆಗೆ ಬಡತವೆಂಬುವುದು ಅಡ್ಡಿಯಾಗಿಲ್ಲ. ಇದೇ ಕಾರಣದಿಂದ ಆಕೆ ಚಿನ್ನದ ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು.
ಸಾಧನೆ ಮಾಡುವ ಗುರಿ ಇದ್ರೆ, ಸಾಧಿಸುವ ಛಲ ಇದ್ದರೆ ಯಾವುದೇ ಕಾರ್ಯವನ್ನು ಸಾಧಿಸಿ ತೋರಿಸಬಹುದು. ಅದಕ್ಕೆ ಸಾಕ್ಷಿಯಾಗಿ ಆ ವಿದ್ಯಾರ್ಥಿನಿ ಸಾಧಿಸಿ ತೋರಿಸಿದ್ದಾಳೆ. ಓರ್ವ ರೈತನ ಮಗಳು ಅದ್ಭುತ ಸಾಧನೆ ಮಾಡಿ ಸಾಧನೆ ಶಿಖರ ಏರಿದ್ದಾಳೆ. ರೈತನ ಮಗಳಾಗಿದ್ದರೂ ಭರ್ಜರಿ ಚಿನ್ನದ ಭೇಟೆಯಾಡಿ ಚಿನ್ನದ ಹುಡುಗಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.
ವೇದಿಕೆ ಮೇಲೆ ರಾಜ್ಯಪಾಲರಿಂದ ಪದವಿ ಪ್ರಮಾಣಪತ್ರ ಚಿನ್ನದ ಪದಕ ವಿತರಣೆ. ತಮಗೆ ಸಿಕ್ಕ ಚಿನ್ನದ ಪದಕ ತೋರಿಸಿ ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳು. ಇಡೀ ಘಟಿಕೋತ್ಸವದಲ್ಲಿ ಹಬ್ಬದ ವಾತಾವರಣ ಸಾಂಪ್ರದಾಯಿಕ ಡ್ರೆಸ್ ನಲ್ಲಿ ಮಿಂಚಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು. ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ.
ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ 11ನೇ ಘಟಿಕೋತ್ಸವ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಸ್ನಾತಕ,ಸ್ನಾತಕೋತ್ತರ, ಪಿಹೆಚ್ ಡಿ ಸೇರಿದಂತೆ ಒಟ್ಟು 680 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು. ಇದರಲ್ಲಿ ಒಂದು ವಿದ್ಯಾರ್ಥಿನಿ ಸಾಧನೆ ಮಾತ್ರ ಅಪಾರ. ಸಾಧಿಸೋಕೆ ಛಲ ಬೇಕು ಗುರಿಯಿರಬೇಕು ಎಂಬುದನ್ನು ಓರ್ವ ರೈತನ ಮಗಳು ಸಾಧಿಸಿ ತೋರಿಸಿದ್ದಾಳೆ.
ಉಮ್ಮೇಸರಾ ಹಸ್ಮತ್ ಅಲಿ ಎಂಬ ವಿದ್ಯಾರ್ಥಿನಿ ತೋಟಗಾರಿಕೆ ವಿಜ್ಞಾನಿಗಳ ಬಿ ಎಸ್ ಸಿ ಪದವಿಯಲ್ಲಿ ಬರೊಬ್ಬರಿ 16 ಚಿನ್ನದ ಪದಕ ಪಡೆದು ಚಿನ್ನದ ಹುಡುಗಿ ಎನ್ನಿಸಿಕೊಂಡಿದ್ದಾಳೆ. ತೋಟಗಾರಿಕೆ ಮಹಾವಿದ್ಯಾಲಯ ಶಿರಸಿಯಲ್ಲಿ ಬಿಎಸ್ ಸಿ ಪದವಿ ಓದಿದ ಉಮ್ಮೇಸರಾ ಗೆ 16 ಚಿನ್ನದ ಪದಕಗಳು ಅರಸಿ ಬಂದಿವೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ನಿಂದ ಚಿನ್ನದ ಪದಕ ಪಡೆದ ಉಮ್ಮೇಸರಾ ಚಿನ್ನದ ಪದಕಗಳನ್ನು ತಮ್ಮ ತಂದೆತಾಯಿ ಕೈಗೆ ಕೊಟ್ಟು ಸಂಭ್ರಮಿಸಿದರು.