ಚಂಡಿಗಢ : ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಆಸ್ಪತ್ರೆಗೆ ದಾಖಲಾಗಿದ್ದಾರೆ. 34 ವರ್ಷಗಳ ಹಿಂದೆ 65 ವರ್ಷದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲ ಸೆಂಟ್ರಲ್‌ ಜೈಲಿನಲ್ಲಿದ್ದ ಸಿಧು ಅವರನ್ನು ಪಟಿಯಾಲದಲ್ಲಿರುವ ರಾಜೇಂದ್ರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನವಜೋತ್ ಸಿಂಗ್ ಸಿಧು ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಸಿಧು ಅವರು ವೇಯ್ಟ್‌ ಅಲರ್ಜಿಯಿಂದ ಬಳಲುತ್ತಿದ್ದಾರೆ ಎಂದು ಸಿಧು ಪರ ವಕೀಲರು ತಿಳಿಸಿದ್ದಾರೆ. ಸಿಧು ಮತ್ತು ಅವರ ಗೆಳೆಯ ರೂಪಿಂದರ್‌ ಸಿಂಗ್‌ ಸಂಧು ಅವರು ಪಟಿಯಾಲಾದಲ್ಲಿ 1988ರ ಡಿಸೆಂಬರ್‌ 27ರಂದು ರಸ್ತೆ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಜಿಪ್ಸಿಯಲ್ಲಿ ಕುಳಿತಿದ್ದರು. ಆ ಸಂದರ್ಭದಲ್ಲಿ ಗುರ್ನಾಮ್‌ ಸಿಂಗ್‌ ಮತ್ತು ಇತರ ಇಬ್ಬರು ಕಾರಿನಲ್ಲಿ ಅಲ್ಲಿಗೆ ಬಂದರು. ರಸ್ತೆ ಮಧ್ಯದಿಂದ ಜಿಪ್ಸಿ ತೆಗೆಯುವಂತೆ ಸಿಧು ಮತ್ತು ಸಂಧು ಅವರನ್ನು ಗುರ್ನಾಮ್‌ ಕೋರಿದ್ದರು. ಇದರಿಂದ ವಾಗ್ವಾದ ನಡೆದು, ಸಿಧು ಅವರು ಗುರ್ನಾಮ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಗುರ್ನಾಮ್‌ ಸಿಂಗ್‌ ಅವರು ಆಸ್ಪತ್ರೆಯಲ್ಲಿ ನಂತರ ಮೃತಪಟ್ಟರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲದ ಸೆಷನ್ಸ್‌ ನ್ಯಾಯಾಲಯವು ಸಿಧು ಅವರನ್ನು 1999ರಲ್ಲಿ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಪಂಜಾಬ್‌–ಹರಿಯಾಣ ಹೈಕೋರ್ಟ್‌, ಸಿಧು ಅವರಿಗೆ 2006ರಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಿತ್ತು. ಸಿಧು ಅವರು ಸುಪ್ರೀಂ ಕೋರ್ಟ್‌ಗೆ 2018ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣವು 30 ವರ್ಷ ಹಳೆಯದು ಮತ್ತು ಸಿಧು ಅವರು ಆಯುಧವನ್ನೇನೂ ಬಳಸಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್‌, ಶಿಕ್ಷೆಯನ್ನು ರದ್ದು ಮಾಡಿತು. 1,000 ದಂಡವನ್ನು ಮಾತ್ರ ವಿಧಿಸಿತು. ಈ ಆದೇಶವನ್ನು ಮರುಪರಿಶೀಲಿಸಬೇಕು ಮತ್ತು ಸಿಧು ಅವರ ವಿರುದ್ಧ ಹೆಚ್ಚು ಗುರುತರವಾದ ಆರೋಪಗಳನ್ನು ಹೊರಿಸಬೇಕು ಎಂದು ಗುರ್ನಾಮ್‌ ಅವರ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸಿಧು ವಿರೋಧಿಸಿದ್ದರು. ಈಗ ಅದೇ ಅರ್ಜಿಯ ಆಧಾರದಲ್ಲಿ ಸಿಧು ಅವರಿಗೆ ಈಗ ಒಂದು ವರ್ಷ ಶಿಕ್ಷೆಯಾಗಿದೆ.

Leave a Reply

Your email address will not be published. Required fields are marked *

error: Content is protected !!