ಉಳ್ಳಾಲ: ಪಡೆದುಕೊಂಡಿದ್ದ ಹಣವನ್ನು ಹಿಂತಿರುಗಿಸುವ ನೆಪದಲ್ಲಿ ಅನ್ಯಮತೀಯ ಯುವಕನೋರ್ವ ತನ್ನ ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಿನ್ನೆ ರಾತ್ರಿ ಮಂಗಳೂರು ಹೊರವಲಯದ ಉಳ್ಳಾಲ ಅಬ್ಬಂಜರ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಸ್ಥಳಕ್ಕೆ ಎಂಟ್ರಿ ನೀಡಿದ ಬಜರಂಗದಳದ ಕಾರ್ಯಕರ್ತರು ಕಾಮುಕನಿಗೆ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಡ್ಯಾರ್ ಪದವು ನಿವಾಸಿ ಮುನೀರ್ (27)ಬಂಧಿತ ಆರೋಪಿ. ಮುನೀರ್ ಮತ್ತು ಉಳ್ಳಾಲ ಬೈಲ್ ನಿವಾಸಿ ಸಂತ್ರಸ್ತ ವಿವಾಹಿತ ಮಹಿಳೆ ತೊಕ್ಕೊಟ್ಟಿನ ಸಾಗರ್ ಕಲೆಕ್ಷನ್ ಬಟ್ಟೆ ಮಳಿಗೆಯಲ್ಲಿ ಉದ್ಯೋಗಿಗಳು. ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಒಬ್ಬರಿಗೊಬ್ಬರು ಪರಿಚಯಸ್ಥರಾಗಿದ್ದರು.
ಮಹಿಳೆ ವಿವಾಹಿತೆಯಾಗಿದ್ದು ಒಂದು ಮಗು ಕೂಡಾ ಇದೆ. ಬುಧವಾರ ರಾತ್ರಿ ಮುನೀರ್ ಅಬ್ಬಂಜರದ ನಿರ್ಜನ ಪ್ರದೇಶದಲ್ಲಿ ಮಹಿಳೆಯನ್ನು ಭೇಟಿಯಾಗಿದ್ದ. ಹಣ ಹಿಂದಿರುಗಿಸುವ ಸೋಗಿನಲ್ಲಿ ಮುನೀರ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂದರ್ಭ ಸ್ಥಳೀಯ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಆರೋಪಿ ಮುನೀರ್ ಗೆ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.