ಬೆಳ್ತಂಗಡಿ :ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಸಚಿವ ಸುನಿಲ್ ಕುಮಾರ್ ಉಳ್ಳಾಲವೂ ಸೇರಿದಂತೆ ಈ ವರ್ಷ ದ.ಕ. ಜಿಲ್ಲೆ ಮತ್ತು ಉಡುಪಿಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕೆಂದು ವಿಶೇಷ ತಂತ್ರಗಾರಿಕೆ ರೂಪಿಸಿಕೊಂಡು ಹೊರಟಿದ್ದೇವೆ ಎಂದರು.
ಮುಂದಿನ ಮುಖ್ಯಮಂತ್ರಿ ಎಂದು ತಾನೇ ಎಂದು ಘೋಷಿಸಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ತಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬುದೇ ಇನ್ನೂ ತಿಳಿದಿಲ್ಲ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆಲುವಿನ ಕನಸು ಕಾಣುತ್ತಿದೆ. ಎಂದು ಸುನಿಲ್ ಲೇವಡಿ ಮಾಡಿದರು.
ರಾಹುಲ್ ಗಾಂಧಿ ಎಲ್ಲೆಲ್ಲಿ ಕಾಲಿಡುತ್ತಾರೊ ಆ ಊರುಗಳೆಲ್ಲ ಕಾಂಗ್ರೆಸ್ ಮುಕ್ತವಾಗುತ್ತವೆ ಎಂಬ ಮಾತು ಇಂದು ನಿಜವಾಗಿದೆ. ರಾಹುಲ್ ಪಾದಯಾತ್ರೆ ಕರ್ನಾಟಕವನ್ನು ದಾಟಿ ಆಂಧ್ರಪ್ರದೇಶ, ತೆಲಂಗಾಣ ಕಡೆ ಹೋಗುತ್ತಿರಬೇಕಾದರೆ ರಾಜ್ಯದ ಹಲವು ಜನ ಇಂದು ಕಾಂಗ್ರೆಸ್ ಬಿಟ್ಟು ಬಿಜೆಪಿ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ಚಾಮರಾಜ ನಗರ ಮತ್ತು ವಿಯಪುರ ಪುರಸಭೆ ಚುನಾವಣೆಗಳನ್ನು ಗೆದ್ದಾಗಲೇ ನಮಗೆ ಸೂಚನೆ ಸಿಕ್ಕಿತ್ತು. ಅತ್ತ ಗುಜರಾತ್ ಚುನಾವಣೆ ಇಡೀ ದೇಶದ ಗಮನವನ್ನು ಸೆಳೆಯುತ್ತಿದೆ. ಸಮೀಕ್ಷೆಗಳ ಪ್ರಕಾರ ಗುಜರಾತ್ನಲ್ಲಿ 7ನೇ ಬಾರಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ಹಿಮಾಚಲವನ್ನು ಬಿಜೆಪಿ ಗೆಲ್ಲಲಿದೆ. ಇದು ರಾಜ್ಯ ರಾಜಕಾರಣದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ ಎಂದರು.