ಮಂಗಳೂರು: ಕುಡುಕನೋರ್ವನಿಗೆ ಅದೃಷ್ಟವೆಂಬಂತೆ ರಸ್ತೆ ಬದಿಯಲ್ಲಿ ಹತ್ತು ಲಕ್ಷ ರೂಪಾಯಿ ಸಿಕ್ಕಿದ್ದು ಆದರೆ ಈತನ ತಲೆಗೇರಿದ ಅಮಲಿನ ಪರಿಣಾಮ ಅಷ್ಟೂ ದುಡ್ಡು ಅರ್ಧ ಗಂಟೆಯಲ್ಲಿ ಪೊಲೀಸರ ಪಾಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನ.27ರಂದು ನಗರದ ಪಂಪ್ವೆಲ್ ಬಳಿ ಕನ್ಯಾಕುಮಾರಿ ಮೂಲದ ಪಿ. ಶಿವರಾಜ್ (49) ಎಂಬುವವರಿಗೆ ಬಿದ್ದುಕೊಂಡಿದ್ದ ಹತ್ತು ಲಕ್ಷ ರೂಪಾಯಿಯ ನೋಟಿನ ಕಟ್ಟು ಸಿಕ್ಕಿದೆ. ಇವರು ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದು ಬೋಂದೇಲ್ನ ಕೃಷ್ಣನಗರದಲ್ಲಿ ವಾಸವಾಗಿದ್ದಾರೆ.
ಇವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದು ಮಗಳು ಪಿಯು ವಿದ್ಯಾರ್ಥಿನಿ. ಮದ್ಯವೇ ಜೀವನ ಎಂಬ ಬದುಕು ಇವರದ್ದು. ಮನೆಗೂ ಹೋಗದೆ ರಸ್ತೆ ಬದಿ, ಬಸ್ ನಿಲ್ದಾಣಗಳಲ್ಲಿ ಮಲಗುವ ಇವರು ಆಹಾರಕ್ಕಾಗಿ ಹೊಟೇಲ್ನ್ನೇ ಅವಲಂಬಿಸಿಕೊಂಡಿದ್ದಾರೆ. ಇವರು ನ.27ರಂದು ಎಂದಿನಂತೆ ಕುಡಿಯುತ್ತಾ ಪಂಪ್ವೆಲ್ ಮೇಲ್ಸೇತುವೆ ಬಳಿ ಬೀಡಿ ಸೇದುತ್ತಾ ನಿಂತಿದ್ದರು. ಅಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ಇಂದು ಚೀಲ ಬಿದ್ದಿತ್ತು. ಅಲ್ಲೇ ಇದ್ದ ಕೂಲಿ ಕಾರ್ಮಿಕ ಚೀಲ ಹಾಗೂ ಶಿವರಾಜ್ನನ್ನೇ ಬಹು ಸೂಕ್ಷ್ಮವಾಗಿ ಗಮನಿಸುತ್ತಿದ್ದ.
ಇನ್ನು ಮುಂದೆ ಅವಾಂತರಗಳಾಗುವುದು ಬೇಡ ಎಂದು ಶಿವರಾಜ್ ಆ ಚೀಲವನ್ನು ತೋರಿಸುತ್ತಾನೆ. ಇಬ್ಬರೂ ಚೀಲವನ್ನು ಓಪನ್ ಮಾಡಿದಾಗ 500 ರೂ. ನೋಟುಗಳಿರುವ ನೋಟಿನ ಕಂತೆ ನೋಡಿ ಶಾಕ್ ಆಗಿದ್ದಾರೆ. ಬಯಸದೆ ಬಂದ ಭಾಗ್ಯಕ್ಕೆ ಅಚ್ಚರಿಯಾದ ಅವರು ಖುಷಿಯಲ್ಲಿ ಶಿವರಾಜ್ ಅದೇ ನೋಟಿನ ಕಟ್ಟಿನಲ್ಲಿ ಒಂದು ಸಾವಿರ ರೂ ನಲ್ಲಿ ಮತ್ತೆ ಕುಡಿದು ಟೈಟಾಗಿದ್ದಾರೆ.
ಚೀಲವನ್ನು ಹಿಡಿದುಕೊಂಡು ಕುಡಿದು ಟೈಟಾಗಿ ಉಳ್ಳಾಲ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೂಲಿ ಕಾರ್ಮಿಕ ಇದ್ರಲ್ಲಿ ನನಗೇನು ಕೊಡೋದಿಲ್ಲವಾ…? ಎಂದು ಪ್ರಶ್ನೆ ಮಾಡುತ್ತಾನೆ. ಮೊದಲೇ ನಶೆಯಲ್ಲಿದ್ದ ಶಿವರಾಜ್ ಅವನಿಗೂ ಒಂದು ಬಂಡಲ್ ನೋಟು ಆತನ ಕೈಗಿಡುತ್ತಾನೆ. ಅದ್ಯಾಕೋ ಅಮಲು ನಿಂತಿಲ್ಲ, ನಶೆ ಇಳಿದಿಲ್ಲ. ಮತ್ತೆ ಹೊಟೇಲಿಗೆ ಹೋಗಿ ಉದರವನ್ನೂ ತುಂಬಿಸಿಕೊಂಡ. ಇಷ್ಟರಲ್ಲಿ ಯಾರೊ ಕೊಟ್ಟ ಮಾಹಿತಿಯಂತೆ ಪೊಲೀಸರು ಆತನಿದ್ದ ಜಾಗಕ್ಕೆ ಬಂದು ಠಾಣೆಗೆ ಅವನನ್ನು ಕರೆದುಕೊಂಡು ಹೋದರು. ಆದರೆ ಇದೆಲ್ಲಾ ನಡೆಯುವ ಮೊದಲೇ ಪಾಲಿಗೆ ಬಂದದ್ದೇ ಮೃಷ್ಟಾನ್ನ’ ಎಂಬಂತೆ ಕೂಲಿ ಕಾರ್ಮಿಕ ಕೈಗೆ ಬಂದ ಹಣವನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ.
ಇನ್ನು ಪೊಲೀಸರು ಶಿವರಾಜ್ನನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ನಡೆದ ವಿಷಯವನ್ನು ವಿವರಿಸುತ್ತಾರೆ.
ಘಟನೆ ನಡೆದು ವಾರ ಕಳೆದರೂ ಹಣದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಲ್ಲ. ವಾರ ಕಳೆದರೂ ಹಣದ ವಾರೀಸುದಾರರ ಪತ್ತೆಯಿಲ್ಲ. ಈ ಬಗ್ಗೆ ಯಾರೂ ದೂರು ನೀಡಿಲ್ಲ.
ಇದೀಗ ಮೂರು ದಿನದ ಬಳಿಕ ಶಿವರಾಜ್ನನ್ನು ಪೊಲೀಸರು ಠಾಣೆಯಿಂದ ಹೊರಬಿಟ್ಟಿದ್ದಾರೆ.
ಹಣ ಕಂಕನಾಡಿ ಠಾಣೆಯಲ್ಲಿ ಭದ್ರವಾಗಿದೆ. ಈ ಬಗ್ಗೆ ಸ್ವತಃ ಅಭಿಪ್ರಾಯ ಹಂಚಿಕೊಂಡಿರುವ ಶಿವರಾಜ್ ‘ನಾವು ದಿನಕ್ಕೆ 300 ರೂ. ದುಡಿಯುವವರು. 19 ವರ್ಷಕ್ಕೆ ನಾವು ದುಡಿಯಲು ಬಂದವರು. ನಮಗೆ ಯಾರದ್ದೋ ಹಣ, ಸಿಕ್ಕಿಬಿದ್ದ ಹಣ ಬೇಡವೇ ಬೇಡ. ಒಂದು ಬಂಡಲ್ ತೆಗೆದುಕೊಂಡು ಹೋದ ವ್ಯಕ್ತಿಯನ್ನು ಕರೆದುಕೊಂಡು ಬಂದರೆ ಹಣ ಕೊಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಏನು ಮಾಡಬೇಕೆಂದು ಗೊತ್ತಾಗ್ತಿಲ್ಲ’ ಎಂದು ಹೇಳಿದ್ದಾರೆ.