ಮಂಗಳೂರು: ಸರ್ಕಾರ ಕೆಲವು ನೀತಿಗಳಲ್ಲಿ ತಾರತಮ್ಯ ಮಾಡುತ್ತದೆ. ಪರಿಹಾರ ಕೊಡುವುದರಲ್ಲಿ ಕೂಡಾ ಸರ್ಕಾರ ಭೇಧಭಾವ ಮಾಡಿದೆ. ಈ ರೀತಿಯ ತಾರತಮ್ಯ ಧೋರಣೆಯನ್ನು ನಾವು ಸಹಿಸುವುದಿಲ್ಲ. ಪಿಎಫ್ಐ ಬ್ಯಾನ್ ಮಾಡಿದಂತೆ ಯಾವ ಸಂಘಟನೆಗಳು ದೇಶದಲ್ಲಿ ಕೊಲೆ, ಅನಾಚಾರಕ್ಕೆ ಕಾರಣವಾಗುತ್ತಿದೆಯೋ ಅವೆಲ್ಲದರ ಮೇಲೆ ಸರ್ಕಾರ ಒಂದೇ ರೀತಿಯ ಕಾನೂನು ಕ್ರಮ ಜಾರಿ ಮಾಡಲಿ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಪಿಎಫ್ಐ ಬ್ಯಾನ್ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಅವರು ‘ದೇಶಕ್ಕೆ ಗಲಭೆ ತರುವಂತಹ ಯಾವುದೇ ಸಂಘಟನೆಗಳು ಆದರೂ ಅದರ ಮೇಲೆ ಸರ್ಕಾರ ನಿಯಂತ್ರಣ ಹೇರುವುದು ಸರಿ. ಆದರೆ ಎಲ್ಲಾ ಸಂಘಟನೆಗಳ ಮೇಲೆ ಒಂದೇ ರೀತಿಯ ಕಾನೂನು ಕ್ರಮವನ್ನು ಜಾರಿ ಮಾಡಬೇಕು.
ತಾರತಮ್ಯವಿಲ್ಲದೆ, ಅನ್ಯಾಯವನ್ನು ಯಾರಿಗೂ ಮಾಡದೆ ಸದುದ್ದೇಶದ ನಿರ್ಧಾರ ಇರಬೇಕು. ಒಂದು ಕ್ರಮದ ಮೂಲಕ ಭವಿಷ್ಯದಲ್ಲಿ ನಮ್ಮ ಸಮಾಜದಲ್ಲಿ ಕೋಮುಭಾವನೆ, ಅಶಾಂತಿ ಇಲ್ಲ ಎನ್ನುವಂತೆ ಮಾಡುವುದು ಇಲ್ಲಿ ಮುಖ್ಯವಾಗುತ್ತದೆ.
ಸಮಾಜವನ್ನು ವಿಭಾಗ ಮಾಡುವ ಯಾವುದೇ ಸಂಸ್ಥೆಗಳಿದ್ದರೆ ದ್ವೇಷ ಮಾಡದೆ ಸಂವಿಧಾನಕ್ಕೆ ಅನುಗುಣವಾಗಿ ಸಂವಿಧಾನ ವಿರೋಧಿಸುವ ಎಲ್ಲಾ ಕಾನೂನನ್ನು ಎಲ್ಲರ ಮೇಲೆ ಹೇರುವುದು ಸರ್ಕಾರ ತೋರಿಸುವ ನಿಜವಾದ ದೇಶಪ್ರೇಮ ಆಗುತ್ತದೆ.
ಸಹೋದರತೆ, ಅನ್ಯಾಯ ಮಾಡದೆ, ಒಬ್ಬರಿಗೊಬ್ಬರು ನೆರವಾಗುವ ಯಾವುದೇ ಕಾನೂನು ಬಂದರೂ ಸ್ವಾಗತಾರ್ಹ.
ಮುಂದೆ ಭವಿಷ್ಯದ ಸಮಾಜದಲ್ಲಿ ಅಂತಹ ಯಾವುದೇ ಸಂಘಟನೆಗಳಿದ್ದರೂ ಮುಂದೆ ಯಾವುದೇ ರೀತಿಯ ಅನಾಚಾರ, ಕೊಲೆ, ಕೋಮುದ್ವೇಷಕ್ಕೆ ಕಾರಣವಾಗಬಾರದು ಎಂದು ಕಿಡಿಕಾರಿದರು.