ಉಡುಪಿ: ಬಿಜೆಪಿ ಪಕ್ಷದಲ್ಲಿ ಶಿಸ್ತು ಇದೆ,ಕಾಂಗ್ರೆಸ್ನ ವೇದಿಕೆಗಳಲ್ಲಿ ಜನಜಂಗುಳಿ ಇರುತ್ತದೆ. ಬಿಜೆಪಿ ವೇದಿಕೆಯಲ್ಲಿ ಕೆಲವೇ ಕೆಲವು ಜನ ಕುಳಿತುಕೊಳ್ಳುತ್ತಾರೆ.ಇದು ಬಿಜೆಪಿ ಪಕ್ಷದ ಸಂಪ್ರದಾಯ. ಅದನ್ನು ಡಿಕೆ ಶಿವಕುಮಾರ್ ಕಲಿತುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬಿಜೆಪಿಯಲ್ಲಿ ಪ್ರಮೋದ್ ಮಧ್ಚರಾಜ್ ಗೆ ವೇದಿಕೆ ಸಿಗುವುದಿಲ್ಲ ಎಂಬ ಡಿಕೆಶಿ ಲೇವಡಿಗೆ ಉತ್ತರಿಸಿದ ಮಧ್ವರಾಜ್ ಕಾಂಗ್ರೆಸ್ ನ ಸಂಪ್ರದಾಯಕ್ಕೂ ಬಿಜೆಪಿ ಸಂಪ್ರದಾಯಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಕಾಂಗ್ರೆಸ್ ವೇದಿಕೆಗಳಲ್ಲಿ ಜನಜಂಗುಳಿ ಇರುತ್ತದೆ…ಎಲ್ಲರೂ ವೇದಿಕೆಗೆ ಹತ್ತುವವರೇ ಇರುವುದು ಎಂದರು.
ಬಿಜೆಪಿಯಲ್ಲಿ ಹಾಗಿಲ್ಲ, ಶಿಸ್ತಿದೆ. ಬಿಜೆಪಿಯಲ್ಲಿ ಮಂತ್ರಿ, ಶಾಸಕ, ಸಂಸದರು ಕೂಡಾ ಕೆಳಗೆ ಕುಳಿತು ಕೊಳ್ಳುತ್ತಾರೆ. ಬಿಜೆಪಿಯ ಸಂಪ್ರದಾಯವನ್ನು ಡಿಕೆ ಶಿವಕುಮಾರ್ ಕಲಿತುಕೊಳ್ಳುವುದು ಒಳ್ಳೆಯದು ಎಂದು ಸಲಹೆ ಕೊಡುತ್ತೇನೆ.
ವೇದಿಕೆ ಹುಡುಕಿಕೊಂಡು ಹೋಗುವ ಜಾಯಮಾನ ನನ್ನದಲ್ಲ. ಬಿಜೆಪಿಗೆ ಕಾರ್ಯಕರ್ತನಾಗಿ ಸೇರಿದ್ದೇನೆ, ಕಾರ್ಯಕರ್ತನೊಟ್ಟಿಗೆ ಕುಳಿತುಕೊಳ್ಳುತ್ತೇನೆ. ಇದರಲ್ಲಿ ನನಗೆ ಯಾವ ಮುಜುಗರ, ಬೇಸರ ಇಲ್ಲ ಎಂದಿದ್ದಾರೆ.
ನಾನು ಪೂರ್ವ ನಿರ್ಧಾರ ಇಲ್ಲದೇ ಬಿಜೆಪಿಗೆ ಸೇರ್ಪಡೆ ಆಗಿದ್ದೇನೆ. ಸ್ಥಳೀಯ ಕಾರ್ಯಕರ್ತರ ವಿಶ್ವಾಸ ಪಡೆಯದೆ ಬಿಜೆಪಿ ಯಾರನ್ನು ಸೇರಿಸಿಕೊಳ್ಳುವುದಿಲ್ಲ. ಆದರೆ ಕಾಂಗ್ರೆಸ್ ಗೆ ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು.
ನನ್ನ ಬೆಂಬಲಿಗರಲ್ಲಿ ಯಾರಿಗೆಲ್ಲಾ ಬಿಜೆಪಿ ಸೇರ್ಪಡೆಗೆ ಆಸಕ್ತಿ ಇದೆ ಕೇಳಿಲ್ಲ. ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪರಸ್ಪರ ವಿರೋಧಿಗಳಾಗಿರುತ್ತಾರೆ. ಯಾರನ್ನೂ ಬಿಜೆಪಿ ಸೇರಲು ಬಲವಂತ ಮಾಡುವುದಿಲ್ಲ. ಸೇರ್ಪಡೆಗೂ ಮುನ್ನ ಕಾರ್ಯಕರ್ತರ ಷರತ್ತುಗಳನ್ನು ಕೇಳಬೇಕಾಗುತ್ತದೆ ಎಂದರು.