ಬ್ರಹ್ಮಾವರ: ಮಂದಾರ್ತಿ ಸಮೀಪ ಹೆಗ್ಗುಂಜೆಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ನಿರ್ಜನ ಪ್ರದೇಶದ ಕಾಡಿನ ರಸ್ತೆಯಲ್ಲಿ ಸುಟ್ಟುಹೋದ ಕಾರು ಹಾಗೂ ಎರಡು ಮೃತದೇಹ ಪತ್ತೆಯಾಗಿದೆ.
“ಭಾನುವಾರ ಮುಂಜಾನೆ 3.30 ಗಂಟೆ ಸುಮಾರಿಗೆ ಬೆಂಕಿ ಹೊತ್ತಿ ಉರಿಯುವುದನ್ನು ನೋಡಿದ ಸ್ಥಳೀಯರು ವಿದ್ಯುತ್ ಅವಘಡ ಆಗಿರಬಹುದೇ ಎಂದು ಎದ್ದು ಬಂದು ನೋಡಿದರೆ ಹೊತ್ತಿ ಉರಿಯುವ ಕಾರು ಪತ್ತೆಯಾಗಿದೆ. ಅಪಘಾತವೇ?, ಆತ್ಮಹತ್ಯೆಯೇ? ಎಂಬುದು ತನಿಖೆಯ ಮೂಲಕ ತಿಳಿದು ಬರಬೇಕು.
ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಬಂದು ಬಾಡಿಗೆ ಕಾರನ್ನು ಪಡೆದುಕೊಂಡು ಬ್ರಹ್ಮಾವರದ ಕಡೆ ಬಂದಿದ್ದರೆನ್ನಲಾಗಿದೆ. ಈ ನಡುವೆ ಇವರಿಬ್ಬರು ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸ್ ದೂರು ದಾಖಲಾಗಿದೆ ಎನ್ನಲಾಗಿದೆ
ಬ್ರಹ್ಮಾವರಕ್ಕೆ ಬಂದಿದ್ದ ಇವರು ಕಾರಿನೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ನಸುಕಿನ ವೇಳೆ ಕಾರು ಹೊತ್ತಿ ಉರಿಯುತ್ತಿರುವುದನ್ನು ಸ್ಥಳೀಯರು ಗಮನಿಸಿ ಪರಿಶೀಲಿಸಿದಾಗ ಅದರೊಳಗೆ ಇಬ್ಬರ ಮೃತದೇಹ ಪತ್ತೆಯಾಗಿದೆ
ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.